ನವದೆಹಲಿ: ಅಧಿಕಾರಿಗಳನ್ನು ಜೈಲಿಗೆ ಹಾಕುವುದರಿಂದ ದೆಹಲಿಗೆ ಆಮ್ಲಜನಕ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಮೇ 3 ರಿಂದ ರಾಷ್ಟ್ರ ರಾಜಧಾನಿಗೆ ಸರಬರಾಜು ಮಾಡಿರುವ ಆಕ್ಸಿಜನ್ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ಪೂರೈಕೆ ಕುರಿತ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ದೆಹಲಿ ಹೈಕೋರ್ಟ್ ಹೊರಡಿಸಿದ್ದ ನ್ಯಾಯಾಂಗ ನಿಂದನೆ ನೋಟಿಸ್ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, "ಮೊದಲು ಜೀವ ಉಳಿಸುವುದನ್ನು ಖಚಿತಪಡಿಸಿಕೊಳ್ಳೋಣ" ಎಂದಿದೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು "ದೆಹಲಿಯಲ್ಲಿ ಸಾಂಕ್ರಾಮಿಕ ರೋಗ ಅತ್ಯಂತ ನಿರ್ಣಾಯಕ ಹಂತದಲ್ಲಿದೆ", ಮೇ 3 ರಿಂದ ದೆಹಲಿಗೆ ಪ್ರತಿದಿನ 700 ಮೆ.ಟನ್ ಆಮ್ಲಜನಕವನ್ನು ಪೂರೈಸುವಂತೆ ಆದೇಶಿಸಿತ್ತು.
"ಕಳೆದ ಮೂರು ದಿನಗಳಲ್ಲಿ ನೀವು ದೆಹಲಿಗೆ ಎಷ್ಟು ಪ್ರಮಾಣದ ಆಮ್ಲಜನಕವನ್ನು ಹಂಚಿಕೆ ಮಾಡಿದ್ದೀರಿ ಎಂದು ನಮಗೆ ತಿಳಿಸಿ" ಎಂದು ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದು ವಿರೋಧಿ ದಾವೆ ಅಲ್ಲ. ಜನರಿಂದ ಆಯ್ಕೆಯಾದ ಕೇಂದ್ರ, ದೆಹಲಿ ಸರ್ಕಾರಗಳು ಕೋವಿಡ್ -19 ರೋಗಿಗಳಿಗೆ ಸೇವೆ ಸಲ್ಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
Advertisement