ಚಂಡೀಗಢ: ಪಂಜಾಬ್ ನಲ್ಲಿ ಮುಸ್ಲಿಂ ಬಾಹುಳ್ಯವಿರುವ ಮಲೇರ್ಕೋಟ್ಲಾ ವನ್ನು ರಾಜ್ಯದ 23 ನೇ ಜಿಲ್ಲೆಯನ್ನಾಗಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಘೋಷಣೆ ಮಾಡಿದ್ದಾರೆ.
ಈದ್ ಆಚರಣೆಯ ದಿನದಂದೇ ಈ ಘೋಷಣೆಯಾಗಿರುವುದರಿಂದ ಅಲ್ಲಿನ ಮುಸ್ಲಿಂ ಸಮುದಾಯದವರಿಗೆ ಮುಖ್ಯಮಂತ್ರಿಗಳು ನೀಡಿರುವ ಉಡುಗೊರೆಯೆಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ. 1454 ರಲ್ಲಿ ಅಫ್ಘಾನಿಸ್ಥಾನದ ಶೇಖ್ ಸದ್ರುದ್ದೀನ್-ಇ-ಜಹಾನ್ ಮಲೇರ್ಕೋಟ್ಲಾವನ್ನು ಸ್ಥಾಪಿಸಿದ್ದಾಗಿ ಇತಿಹಾಸದಿಂದ ತಿಳಿದುಬರುತ್ತದೆ.
1657 ರಲ್ಲಿ ಬಯಾಜಿದ್ ಖಾನ್ ಮಲೇರ್ಕೋಟ್ಲಾವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿಕೊಂಡಿದ್ದ. ಈ ನಂತರದಲ್ಲಿ ಮಲೇರ್ಕೋಟ್ಲಾವನ್ನು ಸ್ಥಳೀಯ ರಾಜ ಸಂಸ್ಥಾನಗಳೊಂದಿಗೆ ವಿಲೀನಗೊಂಡು ಪಟಿಯಾಲಾ ಹಾಗೂ ಈಸ್ಟ್ ಪಂಜಾಬ್ ರಾಜ್ಯಗಳ ಒಕ್ಕೂಟ (ಪಿಇಪಿಎಸ್ ಯು) ರಚನೆಯಾಯಿತು. 1956 ರಲ್ಲಿ ಮಲೇರ್ಕೋಟ್ಲಾ ಪಂಜಾಬ್ ನ ಭಾಗವಾಯಿತು.
ಅಹ್ಮೇದ್ ಗಢ ಹಾಗೂ ಮಲೇರ್ಕೋಟ್ಲಾದ ಉಪವಿಭಾಗಳ ಪುನಾರಚನೆ ಶೀಘ್ರವೇ ಪ್ರಾರಂಭವಾಗಲಿದ್ದು, ಜನಗಣತಿ ಮುಕ್ತಾಯಗೊಂಡ ಬಳಿಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಸಂಗ್ರೂರ್ ನ ಜಿಲ್ಲಾಧಿಕಾರಿಗಳಿಗೆ ಹೊಸ ಜಿಲ್ಲೆಯ ಜಿಲ್ಲಾಡಳಿತ ಕಾರ್ಯನಿರ್ವಹಣೆಗೆ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಮಾಡುವಂತೆ ಸಿಎಮ್ ಸೂಚನೆ ನೀಡಿದ್ದು, ಶೀಘ್ರವೇ ಹೊಸ ಜಿಲ್ಲಾಧಿಕಾರಿಗಳ ನೇಮಕವೂ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ನವಾಬ್ ಶೇರ್ ಮೊಹಮ್ಮದ್ ಖಾನ್ ಅವರ ಹೆಸರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದ್ದು ಇದಕ್ಕಾಗಿ ಮುಖ್ಯಮಂತ್ರಿಗಳು 500 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ. ರಾಯ್ ಕೋಟ್ ರಸ್ತೆಯಲ್ಲಿ 25 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು, ಸ್ಥಳೀಯ ಯುವಕ/ ಯುವತಿಯರಿಗೆ ವೈದ್ಯಕೀಯ ಶಿಕ್ಷಣಕ್ಕೆ ಸಹಕಾರಿಯಾಗಲಿದೆ.
ಮಲೇರ್ಕೋಟ್ಲಾದ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದಕ್ಕಾಗಿ ಮುಬಾರಕ್ ಮನ್ಜಿಲ್ ಅರಮನೆಯನ್ನು ಸಂರಕ್ಷಣೆ ಮತ್ತು ಪುನಃಸ್ಥಾಪನೆ ಮಾಡುವುದಕ್ಕಾಗಿ ಬ್ರಿಟನ್ ನ ಆಗಾ ಖಾನ್ ಫೌಂಡೇಷನ್ ಗೆ ಮನವಿ ಮಾಡಿದ್ದಾರೆ.
Advertisement