ಹರಿದ್ವಾರ್: ಟೂಲ್ಕಿಟ್ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮವನ್ನು ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದು ಇದೊಂದು "ರಾಜಕೀಯ ಪಿತೂರಿ" ಎಂದು ಹೇಳಿದ್ದಾರೆ.
ಕುಂಭಮೇಳವನ್ನು ಕೋವಿಡ್ 19 'ಸೂಪರ್ ಸ್ಪ್ರೆಡರ್' ಎಂದು ನಿಂದಿಸಲು ಕಾಂಗ್ರೆಸ್ ಟೂಲ್ಕಿಟ್ ವಿನ್ಯಾಸಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದ ದಿನದ ನಂತರ ರಾಮದೇವ್ ಈ ಹೇಳಿಕೆ ನೀಡಿದ್ದಾರೆ.
ದೇಶಕ್ಕೆ ವಿರುದ್ಧವಾಗಿರುವ 'ಅಂತಹ ಶಕ್ತಿಗಳನ್ನು' ಬಹಿಷ್ಕರಿಸುವಂತೆ ಜನರನ್ನು ರಾಮದೇವ್ ಒತ್ತಾಯಿಸಿದರು. 'ಟೂಲ್ಕಿಟ್ ಸಹಾಯದಿಂದ ಕುಂಭಮೇಳ ಮತ್ತು ಹಿಂದೂ ಧರ್ಮದ ಚಿತ್ರಣವನ್ನು ಕೆಡಿಸುವುದು ರಾಜಕೀಯ ಪಿತೂರಿ. ಈ ವಿಷಯವನ್ನು ರಾಜಕೀಯಗೊಳಿಸಿ, ಆದರೆ 100 ಕೋಟಿ ಹಿಂದೂಗಳಿಗೆ ಅಗೌರವ ಮಾಡಬೇಡಿ ಎಂದು ವಿನಂತಿಸುತ್ತೇನೆ. ಇನ್ನು ದೇಶಕ್ಕೆ ವಿರುದ್ಧವಾಗಿರುವ ಅಂತಹ ಶಕ್ತಿಯನ್ನು ಬಹಿಷ್ಕರಿಸಿ, ಜೊತೆಗೆ ಇಂತಹವರ ವಿರುದ್ಧ ನಿಲ್ಲುವಂತೆ ಜನರನ್ನು ಕೋರುತ್ತೇನೆ ಎಂದು ಯೋಗ ಗುರು ಹೇಳಿದ್ದಾರೆ.
ಹಿಂದಿನ ದಿನ, ಆಚಾರ್ಯ ಮಹಾಮಂಡಲೇಶ್ವರ ಪೂಜ್ಯ ಸ್ವಾಮಿ ಅವದೇಶಾನಂದ ಗಿರಿ ಜೀ ಅವರು ಕುಂಭಮೇಳವನ್ನು ರಾಜಕೀಯಗೊಳಿಸಬಾರದು ಎಂದು ಜನರನ್ನು ಒತ್ತಾಯಿಸಿದರು. ರಾಷ್ಟ್ರದ ಸಂಸ್ಕೃತಿ, ಆಚರಣೆಗಳು, ನಂಬಿಕೆ ಮತ್ತು ಸಂಪ್ರದಾಯಗಳನ್ನು "ಯೋಜಿತ ರೀತಿಯಲ್ಲಿ" ಕಳಂಕಿತಗೊಳಿಸಲಾಗುತ್ತಿದೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್ಒ) ಸೂಚನೆಗೆ ವಿರುದ್ಧವಾಗಿ ಕೋವಿಡ್ ರೂಪಾಂತರಿಯನ್ನು 'ಇಂಡಿಯನ್ ಸ್ಟ್ರೈನ್' ಅಥವಾ 'ಮೋದಿ ತಳಿ' ಎಂದು ಕರೆಯುವ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಟೂಲ್ಕಿಟ್ ಸೂಚನೆಗಳನ್ನು ಹೊಂದಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿತ್ತು.
Advertisement