ಅಲೋಪಥಿ ಔಷಧಿ: ತೀವ್ರ ವಿರೋಧ ವ್ಯಕ್ತವಾದ ನಂತರ ಹೇಳಿಕೆ ಹಿಂಪಡೆದ ಯೋಗ ಗುರು ರಾಮದೇವ್ 

ಯೋಗ ಗುರು ರಾಮದೇವ್ ಅವರು ಅಲೋಪಥಿ ಔಷಧಿ ಬಗ್ಗೆ ಇತ್ತೀಚಿಗೆ ನೀಡಿದ ಹೇಳಿಕೆಗೆ ವೈದ್ಯವೃಂದದಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಯೋಗ ಗುರು ರಾಮದೇವ್
ಯೋಗ ಗುರು ರಾಮದೇವ್

ನವದೆಹಲಿ: ಯೋಗ ಗುರು ರಾಮದೇವ್ ಅವರು ಅಲೋಪಥಿ ಔಷಧಿ ಬಗ್ಗೆ ಇತ್ತೀಚಿಗೆ ನೀಡಿದ ಹೇಳಿಕೆಗೆ ವೈದ್ಯವೃಂದದಿಂದ ವ್ಯಾಪಕ ಟೀಕೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರ ಪತ್ರಕ್ಕೆ ನಿನ್ನೆ ಪ್ರತಿಕ್ರಿಯಿಸಿದ ಯೋಗಗುರು ರಾಮದೇವ್, ತಾವು ಹೇಳಿಕೆಯನ್ನು ಹಿಂಪಡೆಯುತ್ತಿದ್ದು, ವಿವಾದಕ್ಕೆ ಕೊನೆ ಎಳೆಯಲು ಬಯಸುತ್ತೇನೆ ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಯೋಗ ಗುರು ರಾಮದೇವ್, ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ, ಹಲವು ವೈದ್ಯಕೀಯ ಪದ್ಧತಿಗಳ ವಿವಾದಕ್ಕೆ ಇತಿಶ್ರೀ ಹಾಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲೋಪಥಿ ಔಷಧಿಗಳು ಜನರ ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದು ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳು ಮತ್ತು ವೈದ್ಯರ ಬಗ್ಗೆ ತಮಗೆ ಗೌರವವಿದೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಯೋಗ ಗುರು ರಾಮದೇವ್ ಹೇಳಿರುವ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ರಾಮದೇವ್ ಅವರು ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದು ಹೇಳಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಹೇಳಿತ್ತು.

ಕೋವಿಡ್-19ಗೆ ವೈದ್ಯರು, ವಿಜ್ಞಾನ ಲೋಕ ಕಂಡುಹಿಡಿದಿರುವ ರೆಮೆಡಿಸಿವಿರ್, ಫ್ಯಾಬಿಫ್ಲೂ ಹಾಗೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿರುವ ಇತರ ಔಷಧಿಗಳು ವಿಫಲವಾಗಿದ್ದು ಲಕ್ಷಾಂತರ ರೋಗಿಗಳು ಮೃತಪಟ್ಟಿದ್ದಾರೆ, ಅಲೋಪಥಿ ಔಷಧಿಗಳನ್ನು ತೆಗೆದುಕೊಂಡ ನಂತರವೇ ರೋಗಿಗಳು ಮೃತಪಟ್ಟಿದ್ದಾರೆ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದರು.

ಇಂತಹ ಅವೈಜ್ಞಾನಿಕ ಹೇಳಿಕೆಗಳ ಮೂಲಕ ಜನರ ಹಾದಿತಪ್ಪಿಸುತ್ತಿರುವ ರಾಮದೇವ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ ಅವರನ್ನು ವೈದ್ಯಕೀಯ ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com