ಮುಂಬಯಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ., ಎನ್ಸಿಪಿ ನಾಯಕ ಅಜಿತ್ ಪವಾರ್ ಅವರ ಸುಮಾರು 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
ಹೀಗೆ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದ ಸಂಬಂಧ ಆದಾಯ ತೆರಿಗೆ ಇಲಾಖೆ ಅಜಿತ್ ಪವಾರ್ಗೆ ನೋಟಿಸ್ ಕೂಡ ನೀಡಿದೆ. ಇವಿಷ್ಟೂ ಮೌಲ್ಯದ ಆಸ್ತಿ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸೇರಿದ್ದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ 20 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್, ಅಜಿತ್ ಪವಾರ್ ಪುತ್ರ ಪಾರ್ಥ ಅವರಿಗೆ ಸೇರಿದ, ನಿರ್ಮಲ್ ಹೌಸ್ನಲ್ಲಿರುವ ಸುಮಾರು 25 ಕೋಟಿ ರೂ.ಬೆಲೆಯ ಕಚೇರಿ, ಜರಂದೇಶ್ವರದಲ್ಲಿ ಇರುವ ಸುಮಾರು 600 ಕೋಟಿ ರೂ.ಮೌಲ್ಯದ ಸಕ್ಕರೆ ಕಾರ್ಖಾನೆ, 250 ಕೋಟಿ ರೂ.ಬೆಲೆಯ ಗೋವಾದಲ್ಲಿರುವ ಒಂದು ರೆಸಾರ್ಟ್ ಮತ್ತು ಮಹಾರಾಷ್ಟ್ರದ ವಿವಿಧ 27 ಪ್ರದೇಶಗಳಲ್ಲಿರುವ 500 ಕೋಟಿ ರೂ.ಮೌಲ್ಯದ ಭೂಮಿಯನ್ನು ಬೇನಾಮಿ ಆಸ್ತಿಯೆಂದು ಪರಿಗಣಿಸಿ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಇನ್ನೂ ಮೂರು ತಿಂಗಳಲ್ಲಿ ಅಜಿತ್ ಪವಾರ್ ಈ ಆಸ್ತಿ ಬೇನಾಮಿ ಅಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಅಷ್ಟೂ ಆಸ್ತಿಯ ಕಾನೂನು ಬದ್ಧ ದಾಖಲೆಗಳನ್ನು ಸಲ್ಲಿಸಬೇಕು. ಐಟಿ ಇಲಾಖೆಯ ತನಿಖೆ, ವಿಚಾರಣೆ ಮುಗಿಯುವವರೆಗೂ ಅವರು ಈ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.
ಅಜಿತ್ ಪವಾರ್ ಐಟಿ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲಲ್ಲ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಜಿತ್ ಪವಾರ್ ಕುಟುಂಬಕ್ಕೆ ಸೇರಿದ ಎರಡು ರಿಯಲ್ ಎಸ್ಟೇಟ್ ಗ್ರೂಪ್ನಲ್ಲಿ ಶೋಧ ನಡೆಸಿತ್ತು.ಈ ವೇಳೆ 184 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್ 7ರಂದು 70 ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು.
ನಾವು ಪ್ರತಿ ವರ್ಷ ತೆರಿಗೆ ಪಾವತಿಸುತ್ತೇವೆ. ನಾನು ಹಣಕಾಸು ಸಚಿವನಾಗಿರುವುದರಿಂದ ಹಣಕಾಸಿನ ಶಿಸ್ತಿನ ಬಗ್ಗೆ ನನಗೆ ಅರಿವಿದೆ. ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಘಟಕಗಳು ತೆರಿಗೆ ಪಾವತಿಸಿದ್ದೇವೆ ಎಂದು ಹೇಳಿದ್ದರು.
Advertisement