'ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ': ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ 

ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಆ ದೇಶದ ಜನರ ಮೇಲೆ ಸಾಕಷ್ಟು ಪ್ರಮುಖ ಪರಿಣಾಮಗಳನ್ನು ಬೀರುವುದು ಮಾತ್ರವಲ್ಲದೆ ಅದರ ನೆರೆಹೊರೆಯ ದೇಶಗಳು ಮತ್ತು ಪ್ರದೇಶಗಳ ಮೇಲೆ ಕೂಡ ಅಗಾಧ ಪ್ರಭಾವ ಬೀರುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಆ ದೇಶದ ಜನರ ಮೇಲೆ ಸಾಕಷ್ಟು ಪ್ರಮುಖ ಪರಿಣಾಮಗಳನ್ನು ಬೀರುವುದು ಮಾತ್ರವಲ್ಲದೆ ಅದರ ನೆರೆಹೊರೆಯ ದೇಶಗಳು ಮತ್ತು ಪ್ರದೇಶಗಳ ಮೇಲೆ ಕೂಡ ಅಗಾಧ ಪ್ರಭಾವ ಬೀರುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಬಿಕ್ಕಟ್ಟು ಕುರಿತು ಭಾರತ ಏರ್ಪಡಿಸಿರುವ ಎಂಟು ದೇಶಗಳ ಮಾತುಕತೆಯಲ್ಲಿ ಇಂದು ಮಾತನಾಡಿರುವ ಅಜಿತ್ ದೋವಲ್ ಸಭೆಯಲ್ಲಿ ಮಾತನಾಡಿ, ಅಫ್ಘಾನಿಸ್ತಾನ ಪರಿಸ್ಥಿತಿಗೆ ಸಂಬಂಧಪಟ್ಟಂತೆ ಸ್ಥಳೀಯ ದೇಶಗಳ ಮಧ್ಯೆ ಆಪ್ತ ಸಮಾಲೋಚನೆ, ಉತ್ತಮ ಸಹಕಾರ ಮತ್ತು ಸಮನ್ವಯತೆ ಸಾಧಿಸುವುದು ಅತ್ಯಗತ್ಯವಾಗಿದೆ ಎಂದರು.

ಅಫ್ಘಾನಿಸ್ತಾನ ಬಿಕ್ಕಟ್ಟು ಕುರಿತು ದೆಹಲಿ ಸ್ಥಳೀಯ ಭದ್ರತಾ ಮಾತುಕತೆಯಲ್ಲಿ ರಷ್ಯಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನದ ಅಧಿಕಾರಿಗಳು ಭಾಗವಹಿಸಿದ್ದಾರೆ.

ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಹೆಚ್ಚುತ್ತಿರುವ ಭಯೋತ್ಪಾದನೆ, ಆಮೂಲಾಗ್ರೀಕರಣ ಮತ್ತು ಮಾದಕವಸ್ತು ಕಳ್ಳಸಾಗಣೆ ಬೆದರಿಕೆಗಳನ್ನು ಎದುರಿಸಲು ಪ್ರಾಯೋಗಿಕ ಸಹಕಾರಕ್ಕಾಗಿ ಸಾಮಾನ್ಯ ವಿಧಾನವನ್ನು ಅನುಸರಿಸಲು ಭಾರತ ಈ ಸಭೆಯನ್ನು ಆಯೋಜಿಸಿದೆ. 

ನಾವು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಇಂದು ಸಭೆ ನಡೆಸುತ್ತಿದ್ದೇವೆ. ನಾವೆಲ್ಲರೂ ಆ ದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇವು ಅಫ್ಘಾನಿಸ್ತಾನದ ಜನರಿಗೆ ಮಾತ್ರವಲ್ಲದೆ ಅದರ ನೆರೆಹೊರೆಯವರು ಮತ್ತು ಸ್ಥಳೀಯ ಪ್ರದೇಶದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅಜಿತ್ ದೋವಲ್ ಹೇಳಿದ್ದಾರೆ.

ನೆರೆಹೊರೆಯ ದೇಶಗಳ ಮಧ್ಯೆ ಈ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಅಗತ್ಯವಾಗಿದ್ದು, ಇದರಿಂದ ಫಲಪ್ರದವಾಗಲಿದೆ ಎಂದು ಭಾವಿಸುತ್ತೇನೆ. ನಮ್ಮ ಚರ್ಚೆಗಳು ಉತ್ಪಾದಕ, ಉಪಯುಕ್ತ ಮತ್ತು ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಮತ್ತು ನಮ್ಮ ಸಾಮೂಹಿಕ ಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದರು.

ಈ ಮಧ್ಯೆ, ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರು ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಸಂಬಂಧವನ್ನು ಮರುಹೊಂದಿಸಲು ಉಭಯ ಪಕ್ಷಗಳ ಪ್ರಯತ್ನಗಳ ಭಾಗವಾಗಿ ಪಾಕಿಸ್ತಾನಕ್ಕೆ ಇಂದು ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಕಳೆದ ಅಕ್ಟೋಬರ್ 21 ರಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರ ಕಾಬೂಲ್ ಭೇಟಿಯ ಅನುಸರಣೆಯಾಗಿ ಈ ಭೇಟಿ ನಡೆಯುತ್ತಿದೆ. ಶಾಂತಿಯುತ, ಸ್ಥಿರ, ಸಾರ್ವಭೌಮ, ಸಮೃದ್ಧ ಮತ್ತು ಸಂಪರ್ಕಿತ ಅಫ್ಘಾನಿಸ್ತಾನವನ್ನು ಬೆಂಬಲಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ನವೆಂಬರ್ 10-12 ರವರೆಗೆ ಪಾಕಿಸ್ತಾನಕ್ಕೆ ಉನ್ನತ ಮಟ್ಟದ ಸಚಿವರ ನಿಯೋಗವನ್ನು ಮುಟ್ಟಾಕಿ ಮುನ್ನಡೆಸಲಿದ್ದಾರೆ ಎಂದು ಅದು ಹೇಳಿದೆ. "ವಿನಿಮಯಗಳು ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ, ಜೊತೆಗೆ ವರ್ಧಿತ ವ್ಯಾಪಾರ, ಸಾಗಣೆ ವ್ಯಾಪಾರದ ಅನುಕೂಲ, ಗಡಿಯಾಚೆಗಿನ ಚಲನೆ, ಭೂಮಿ ಮತ್ತು ವಾಯುಯಾನ ಸಂಪರ್ಕಗಳು, ಜನರ ಸಂಪರ್ಕಗಳು ಮತ್ತು ಪ್ರಾದೇಶಿಕ ಸಂಪರ್ಕಗಳ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸುತ್ತವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಕಳೆದ ಆಗಸ್ಟ್ 15 ರಂದು ಕಾಬೂಲ್ ಮೇಲೆ ನಿಯಂತ್ರಣವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಅವರೊಂದಿಗೆ ರಾಜತಾಂತ್ರಿಕವಾಗಿ ತೊಡಗಿಸಿಕೊಳ್ಳಲು ಪಾಕಿಸ್ತಾನವು ಜಗತ್ತನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಅಂತರಾಷ್ಟ್ರೀಯ ಸಮುದಾಯವು ತಾಲಿಬಾನಿಗಳ ಮೇಲೆ ಸಂದೇಹ ಹೊಂದಿವೆ. ವಿಶೇಷವಾಗಿ ತಾಲಿಬಾನಿಗಳ ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳ ಬಗ್ಗೆ ಗೌರವ ತೋರಿಸುವ ಬಗ್ಗೆ ಸಂದೇಹ ಹೊಂದಿವೆ. 

ಅಫ್ಘಾನಿಸ್ತಾನವು ಆಗಸ್ಟ್ 15 ರಿಂದ ತಾಲಿಬಾನ್ ಆಳ್ವಿಕೆಯಲ್ಲಿದೆ, ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ದೇಶವನ್ನು ತೊರೆದು ಯುಎಇಯಲ್ಲಿ ಆಶ್ರಯ ಪಡೆಯುವಂತೆ ತಾಲಿಬಾನ್ ಉಗ್ರರು ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com