ನವದೆಹಲಿ: ತ್ರಿಪುರಾದಲ್ಲಿ ಮಸೀದಿ ಮೇಲೆ ದಾಳಿ ನಡೆದಿದೆ ಎಂಬ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯ ಸುಳ್ಳು ಎಂದು ಹೇಳಿದೆ.
`
ಸುಳ್ಳುವರದಿಗಳ ಬಗ್ಗೆ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವಾಲಯ, ತ್ರಿಪುರಾದಲ್ಲಿನ ಮಸೀದಿಗೆ ಹಾನಿಯಾಗಿರುವುದು ವಾಸ್ತವಗಳ ಸಂಪೂರ್ಣ ತಪ್ಪು ನಿರೂಪಣೆಯಾಗಿದೆ ಎಂದು ಹೇಳಿದೆ. "ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗುತ್ತಿರುವಂತೆ, ತ್ರಿಪುರಾದಲ್ಲಿ ಇಂಥಯ ಯಾವುದೇ ಘಟನೆಗಳಾಗಲೀ ಘಟನೆಗಳ ಪರಿಣಾಮವಾಗಿ ಯಾವುದೇ ವ್ಯಕ್ತಿಯ ಹತ್ಯೆ ಅತ್ಯಾಚಾರವಾಗಲೀ ಸಂಭವಿಸಿಲ್ಲ, ಜನರು ಈ ರೀತಿಯ ನಕಲಿ ಸುದ್ದಿಗಳಿಂದ ದಾರಿ ತಪ್ಪಬಾರದು, ಸಂಯಮ ಕಾಪಾಡಿಕೊಳ್ಳಬೇಕು" ಎಂದು ಹೇಳಿದೆ.
ದರ್ಗಬಜಾರ್ ಪ್ರದೇಶದಲ್ಲಿರುವ ಮಸೀದಿಗೆ ಹಾನಿಯುಂಟಾಗಿಲ್ಲ, ಗೋಮತಿ ಪ್ರದೇಶದ ಪೊಲೀಸರು ಶಾಂತಿ, ಸೌಹಾರ್ದತೆ ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ತ್ರಿಪುರಾಗೆ ಸಂಬಂಧಿಸಿದ ನಕಲಿ ಸುದ್ದಿಯ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ ಅಸಹ್ಯಕರ ಹೇಳಿಕೆಗಳು ಹಿಂಸಾಚಾರ ನಡೆದಿರುವ ವರದಿಯಾಗಿದ್ದು, ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ, ಜನತೆ ಶಾಂತಿಯನ್ನು ಕಾಪಾಡಬೇಕಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಅಮರಾವತಿಯಲ್ಲಿ ಜಿಲ್ಲಾ ಅಧಿಕಾರಿಗಳ ಕಚೇರಿಯ ಎದುರು ಜಮಾಯಿಸಿದ್ದ 8,000 ಮಂದಿ ತ್ರಿಪುರಾದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕೆಂದು ಮನವಿ ಸಲ್ಲಿಸಿದ್ದಾರೆ. ತ್ರಿಪುರಾದಲ್ಲಿನ ನಕಲಿ ಸುದ್ದಿಯನ್ನೇ ನಿಜ ಎಂದು ಭಾವಿಸಿ ನಾಂದೇಡ್, ಮಾಲೇಗಾಂವ್, ವಶಿಮ್, ಯಾವತ್ಮಲ್ ಗಳಲ್ಲಿ ಹಿಂಸಾಚಾರ ನಡೆದಿರುವ ವರದಿಯಾಗಿದೆ.
Advertisement