ನವದೆಹಲಿ: ಮಣಿಪುರದಲ್ಲಿ ಉಗ್ರರ ದಾಳಿ ನಡೆದಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಗ್ರ ದಾಳಿಯಲ್ಲಿ ಸೇನಾ ಅಧಿಕಾರಿ, ಕುಟುಂಬ ಸದಸ್ಯರ ಸಾವಿಗೆ ಸಂತಾಪ ಸೂಚಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶ ರಕ್ಷಣೆಯಲ್ಲಿ ಪ್ರಧಾನಿ ಮೋದಿ ಅಸಮರ್ಥರು ಎಂಬುದು ಈ ದಾಳಿಯ ಮೂಲಕ ಮತ್ತೆ ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಮಣಿಪುರದಲ್ಲಿ ಸೇನಾ ಬೆಂಗಾವಲುಪಡೆಯ ಮೇಲೆ ಭಯೋತ್ಪಾದಕರ ದಾಳಿ, ಮೋದಿ ಸರ್ಕಾರ ದೇಶವನ್ನು ರಕ್ಷಿಸುವುದರಲ್ಲಿ ಅಸಮರ್ಥವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ". ಹುತಾತ್ಮರಾದ ಯೋಧರು ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು, ದೇಶ ಅವರ ತ್ಯಾಗವನ್ನು ಎಂದಿಗೂ ಸ್ಮರಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ರೈಫಲ್ಸ್ ನ ಕರ್ನಲ್ ವಿಪ್ಲವ್ ತ್ರಿಪಾಠಿ ಹಾಗೂ ಅವರ ಪತ್ನಿ, ಪುತ್ರ, ಅರೆಸೇನಾಪಡೆಯ ಇನ್ನಿತರ ನಾಲ್ವರು ಸಿಬ್ಬಂದಿಗಳು ಮಣಿಪುರದಲ್ಲಿ ಶನಿವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಜೈರಾಮ್ ರಮೇಶ್ ಆದಿಯಾಗಿ ಕಾಂಗ್ರೆಸ್ ನ ಹಿರಿಯ ನಾಯಕರು ಘಟನೆಯನ್ನು ಖಂಡಿಸಿದ್ದು, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮಣಿಪುರದ ಪೀಪಲ್ಸ್ ರೆವೆಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್ (ಪಿಆರ್ ಇ ಪಿಎಕೆ) ಪ್ರತ್ಯೇಕತೆಯನ್ನು ಉತ್ತೇಜಿಸುತ್ತಿರುವ ಉಗ್ರ ಸಂಘಟನೆಯಾಗಿದ್ದು, ಕರ್ನಲ್ ತ್ರಿಪಾಠಿ ಅವರ ಬೆಂಗಾವಲು ಪಡೆಯನ್ನು ಸೆಹ್ಖಾನ್ ಗ್ರಾಮದಲ್ಲಿ ಟಾರ್ಗೆಟ್ ಮಾಡಿತ್ತು.
Advertisement