ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕರನ್ನು ಉಗ್ರರು ಹತ್ಯೆ ಮಾಡುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಎಲ್ಲ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಸುಮಾರು ಏಳು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಗುರುವಾರ ಸರ್ಕಾರಿ ಶಾಲೆಗೆ ಗುಂಡು ಹಾರಿಸಿದ ವೇಳೆ ಮಹಿಳಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಮೃತಪಟ್ಟಿದ್ದರು.
'ನಮ್ಮ ಕಾಶ್ಮೀರಿ ಸಹೋದರಿಯರು ಮತ್ತು ಸಹೋದರರ ಮೇಲೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ನೋವಿನ ಸಂಗತಿ ಮತ್ತು ಖಂಡನೀಯ. ಈ ಕಷ್ಟದ ಸಮಯದಲ್ಲಿ ನಾವು ನಮ್ಮ ಕಾಶ್ಮೀರಿ ಸಹೋದರಿಯರು ಮತ್ತು ಸಹೋದರರೊಂದಿಗೆ ನಾವಿದ್ದೇವೆ' ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, 'ಕೇಂದ್ರ ಸರ್ಕಾರವು ಎಲ್ಲಾ ನಾಗರಿಕರ ಸುರಕ್ಷತೆಗಾಗಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
Advertisement