ಶತಕೋಟಿ ಕೋವಿಡ್ ಲಸಿಕೆ ಪೂರೈಕೆ ಕೇವಲ ಸಂಖ್ಯೆಯಲ್ಲ, ದೇಶದ ಸಾಮರ್ಥ್ಯವನ್ನು ತೋರಿಸಿದೆ, ಹೊಸ ಅಧ್ಯಾಯದ ಆರಂಭ: ಪ್ರಧಾನಿ ಮೋದಿ

ಅಕ್ಟೋಬರ್ 21, 2021ಕ್ಕೆ ಭಾರತ ಶತಕೋಟಿ ಕೋವಿಡ್-19 ಲಸಿಕೆ ಪೂರೈಕೆ ಗುರಿಯನ್ನು ಸಾಧಿಸಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. 100 ಕೋಟಿ ಲಸಿಕೆ ಪ್ರಮಾಣ ಕೇವಲ ಸಂಖ್ಯೆಯಲ್ಲ, ರಾಷ್ಟ್ರವಾಗಿ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಅಕ್ಟೋಬರ್ 21, 2021ಕ್ಕೆ ಭಾರತ ಶತಕೋಟಿ ಕೋವಿಡ್-19 ಲಸಿಕೆ ಪೂರೈಕೆ ಗುರಿಯನ್ನು ಸಾಧಿಸಿದೆ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆ. 100 ಕೋಟಿ ಲಸಿಕೆ ಪ್ರಮಾಣ ಕೇವಲ ಸಂಖ್ಯೆಯಲ್ಲ, ರಾಷ್ಟ್ರವಾಗಿ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ದೇಶದ ನಾಗರಿಕರಿಗೆ ಶತಕೋಟಿ ಕೋವಿಡ್ ಲಸಿಕೆ ಪೂರೈಸಿದ ಸಂತೋಷವನ್ನು ಇಂದಿನ ದೇಶವಾಸಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, ಇದು ದೇಶದ, ನಾಗರಿಕರ ಸಾಧನೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದರ ಯಶಸ್ಸು ದಕ್ಕುತ್ತದೆ. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

100 ಕೋಟಿ ಲಸಿಕೆ ಪೂರೈಕೆ ಕೇವಲ ಸಂಖ್ಯೆಯಷ್ಟೇ ಅಲ್ಲ, ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭ, ಭಾರತವು ಕಠಿಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂಬುದಕ್ಕೆ ಒಂದು ಸಾಕ್ಷಿ. ದೇಶವು ತನ್ನ ಗುರಿಗಳ ಈಡೇರಿಕೆಗೆ ಶ್ರಮಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಜೀವಂತ ಉದಾಹರಣೆ: ಆರಂಭದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮದ ಬಗ್ಗೆ ಆತಂಕವಿತ್ತು. ಇಲ್ಲಿ ಶಿಸ್ತು ಹೇಗೆ ಕೆಲಸ ಮಾಡುತ್ತದೆ ಸಹ ತೋರಿಸಲಾಗಿದೆ. ನಮ್ಮ ಸರ್ಕಾರದ 'ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಘೋಷಣೆಗೆ ಜೀವಂತ ಉದಾಹರಣೆ ಈ ಲಸಿಕೆ ಅಭಿಯಾನ ಎಂದರು. 

ಕೋವಿಡ್ ಲಸಿಕೆ ಪೂರೈಕೆಯಲ್ಲಿ ನಾವು ವಿಐಪಿ ಸಂಸ್ಕೃತಿ, ಶ್ರೀಮಂತರು, ಉಳ್ಳವರಿಗೆ ಆದ್ಯತೆ ಎಂದು ನೋಡಲಿಲ್ಲ. ಅದರ ನೆರಳೂ ಕೂಡ ಸೋಂಕಲಿಲ್ಲ. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸಲಾಗಿದೆ ಎಂದು ಯಶಸ್ಸಿನ ಶ್ರಮವನ್ನು ಮುಂದಿಟ್ಟರು. 

ಭಾರತದ ಸಂಪೂರ್ಣ ವ್ಯಾಕ್ಸಿನೇಷನ್ ಕಾರ್ಯಕ್ರಮವು ವಿಜ್ಞಾನದಿಂದ ಹುಟ್ಟಿಕೊಂಡಿದ್ದು, ವಿಜ್ಞಾನ ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ ಎಂದರು.

ಮೇಡ್ ಇನ್ ಇಂಡಿಯಾ: ಭಾರತ ಮತ್ತು ವಿದೇಶಗಳಲ್ಲಿನ ತಜ್ಞರು ಭಾರತದ ಆರ್ಥಿಕತೆಯ ಬಗ್ಗೆ ತುಂಬಾ ಧನಾತ್ಮಕವಾಗಿದ್ದಾರೆ. ಇಂದು, ಭಾರತೀಯ ಕಂಪನಿಗಳಿಗೆ ದಾಖಲೆಯ ಹೂಡಿಕೆ ಬರುವುದರ ಜೊತೆಗೆ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈಗ ಮತ್ತೆ ಜನರಲ್ಲಿ ಆಶಾವಾದ ಮೂಡಿದೆ. ಮೊದಲು ವಿಜ್ಞಾನ-ತಂತ್ರಜ್ಞಾನದ ಕೆಲಸಗಳು ದೇಶದಲ್ಲಿ, ಆ ದೇಶದಲ್ಲಿ ಮಾಡಲ್ಪಟ್ಟಿದೆ ಎಂದು ಕೇಳುತ್ತಿದ್ದೆವು. ಇಂದು ಎಲ್ಲರೂ 'ಮೇಡ್ ಇನ್ ಇಂಡಿಯಾ' ಬಗ್ಗೆ ಮಾತನಾಡುತ್ತಿದ್ದಾರೆ, ಸಾಂಕ್ರಾಮಿಕದ ಹೊರತಾಗಿಯೂ, ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸೆಂಟ್ರಲ್ ವಿಸ್ಟಾ, ಪಿಎಂ ಗಟಿ ಶಕ್ತಿಯಂತಹ ಯೋಜನೆಗಳನ್ನು ಪರಿಚಯಿಸಿದ್ದೇವೆ ಎಂದರು.

ಮುಂಬರುವ ಹಬ್ಬವನ್ನು ಎಚ್ಚರಿಕೆಯಿಂದ ಆಚರಿಸಿ: ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಿ, ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕಲು ಹೆಚ್ಚಿನ ಆದ್ಯತೆ ನೀಡಬೇಕು. ಲಸಿಕೆ ಹಾಕಿಸಿಕೊಂಡವರು ಇತರರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿಕೊಂಡರು. 

1 ಬಿಲಿಯನ್ ಲಸಿಕೆ ಹೆಗ್ಗುರುತನ್ನು ತಲುಪಿದರೂ, ಕೋವಿಡ್ -19 ವಿರುದ್ಧದ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸಬೇಕು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಂದಿನ ದೀಪಾವಳಿ ಸಮಯದಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದರು.

ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನು ಬಳಸುವುದು ಮಾತ್ರವಲ್ಲದೆ, ನಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಸ್ಥಳೀಯತೆಗೆ ಆದ್ಯತೆ ನೀಡುವಂತೆ ಕೇಳಿಕೊಳ್ಳೋಣ ಎಂದು ಸಹ ದೇಶದ ನಾಗರಿಕರಿಗೆ ಸಲಹೆ ನೀಡಿದರು. ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಮೊದಲ ರಕ್ಷಣೆ, ಹೋರಾಟ ಸಾರ್ವಜನಿಕ ಸಹಭಾಗಿತ್ವವಾಗಿತ್ತು. ಅದರ ಭಾಗವಾಗಿ ಜನರು ದೀಪ ಹಚ್ಚುವಂತೆ, ಚಪ್ಪಾಳೆ ತಟ್ಟುವಂತೆ ಹೇಳಲಾಗಿತ್ತು. ಆರೋಗ್ಯ ವಲಯ ಕಾರ್ಯಕರ್ತರನ್ನು ಹುರಿದುಂಬಿಸುವ ಒಂದು ಕ್ರಮವಾಗಿತ್ತು, ಆದರೆ ಇದನ್ನು ಅನೇಕರು ಮೂದಲಿಸಿದರು, ಪ್ರಶ್ನಿಸಿದರು, ದೀಪ ಹಚ್ಚಿದರೆ, ಗಂಟೆ ಬಡಿದರೆ, ಚಪ್ಪಾಳೆ ತಟ್ಟಿದರೆ ಸೋಂಕು ಹೋಗುತ್ತದೆಯೇ ಎಂದು ಕೆಲವರು ಪ್ರಶ್ನೆ ಮಾಡಿದರು. ಇಂದು ಅವರ ಸಂಶಯ ದೂರವಾಗಿರಬಹುದು ಎಂದು ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com