ಆತ್ಮಹತ್ಯೆಗೆ ಮುಂದಾಗಿದ್ದ ಕುಡುಕ ಬಚಾವ್... ಆತನ ರಕ್ಷಣೆಗೆ ಹೋದವರೇ ಜವರಾಯನ ಪಾಲು!

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಆತನನ್ನು ರಕ್ಷಿಸಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳೇ ಸಾವನ್ನಪ್ಪಿರುವ ದಾರುಣ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ನೀರು ಪಾಲು
ನೀರು ಪಾಲು
Updated on

ಅನಂತಪುರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಆತನನ್ನು ರಕ್ಷಿಸಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳೇ ಸಾವನ್ನಪ್ಪಿರುವ ದಾರುಣ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ಮಾತ್ರ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. 

ಮೂಲಗಳ ಪ್ರಕಾರ ಕೃಷ್ಣಾ ಜಿಲ್ಲೆಯ ಜಿ.ಕೊಂಡೂರು ಮಂಡಲಂನ ಮುತ್ಯಾಲಂಪಾಡು ಗ್ರಾಮದ ನಿವಾಸಿ ಪ್ರವೀಣ್ ಮದ್ಯವ್ಯಸನಿಯಾಗಿದ್ದು, ತನ್ನ ಕುಡುಕತದಿಂದಲೇ ಕುಟುಂಬಸ್ಥರಿಂದ ದೂರವಿದ್ದ. ಈ ನಡುವೆ ಇದೇ ವಿಚಾರವಾಗಿ ಕುಟುಂಬಸ್ಥರೊಂದಿಗೆ ಜಗಳವಾಗಿದ್ದು, ಇದರಿಂದ ಕೋಪಗೊಂಡ ಆತ ಕಂಠಪೂರ್ತಿ ಕುಡಿದು ಗ್ರಾಮದ ಸಮೀಪದ ಕೆರೆಯ ಬಳಿ ಹೋಗಿ ನೀರಿಗೆ ಧುಮುಕಿದ್ದಾನೆ. 

ಆತ ನೀರಿಗೆ ಬೀಳುವುದನ್ನು ಕಂಡ ಅದೇ ಗ್ರಾಮದ ನಿವಾಸಿಗಳಾದ ಚಿಲಪರಪು ನಾನಿ (19 ವರ್ಷ) ಮತ್ತು ಪಚ್ಚಿಗೋಳ್ಳ ಚಿನ್ನ ಕೋಟೋಶ್ವರರಾವು (34 ವರ್ಷ) ಎಂಬ ಯುವಕರು ಆತನನ್ನು ರಕ್ಷಣೆ ಮಾಡಲು ನೀರಿ ಧುಮುಕಿದ್ದಾರೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಪ್ರವಾಹದ ನೀರಿನ ರಭಸಕ್ಕೆ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ. ಅಚ್ಚರೆ ಎಂಬಂತೆ ಆತ್ಮಹತ್ಯೆಗಾಗಿ ಧುಮುಕಿದ್ದ ಪ್ರವೀಣ್ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಇಬ್ಬರು ಯುವಕರ ದೇಹಗಳಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆಗಳ ಶೋಧದ ಬಳಿಕ ಇಬ್ಬರೂ ಯುವಕರ ಮೃತದೇಹ ಪತ್ತೆಯಾಗಿದೆ.

ಯಾರನ್ನೋ ರಕ್ಷಿಸಲು ಹೋದ ವ್ಯಕ್ತಿಗಳೇ ದುರಂತ ಸಾವಿಗೀಡಾಗಿದ್ದು ಮಾತ್ರ ನೋವಿನ ಸಂಗತಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com