
ಅರ್ಜುನ್ ಸಿಂಗ್ (ಮಧ್ಯದಲ್ಲಿರುವವರು)
ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮತ್ತೊಮ್ಮೆ ಬಾಂಬ್ ದಾಳಿ ನಡೆದಿದೆ.
ವಾರದ ಹಿಂದೆ ಇಂತಹದ್ದೇ ಪ್ರಕರಣ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡ 24 ಗಂಟೆಗಳಲ್ಲಿ ಮತ್ತೊಮ್ಮೆ ಬಾಂಬ್ ನಿಂದ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಘಟನೆ ವರದಿಯಾಗುತ್ತಿದ್ದಂತೆಯೇ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿದ್ದು ಬಾಂಬ್ ಎಸೆದ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಸಚಿವರ ಮೇಲೆ ಬಾಂಬ್ ದಾಳಿ ಪ್ರಕರಣ: ಬಾಂಗ್ಲಾ ಪ್ರಜೆ ಬಂಧನ
ಈ ಬಗ್ಗೆ ಮಾತನಾಡಿರುವ ಅರ್ಜುನ್ ಸಿಂಗ್, ಟಿಎಂಸಿ ವಿರುದ್ಧ ಆರೋಪ ಮಾಡಿದ್ದು, ದಾಳಿಗೆ ಕಾರಣರಾದ ಗೂಂಡಾಗಳಿಗೆ ಟಿಎಂಸಿ ರಕ್ಷಣೆ ನೀಡುತ್ತಿದೆ ಎಂದು ದೂರಿದ್ದಾರೆ. ಟಿಎಂಸಿ ಅರ್ಜುನ್ ಸಿಂಗ್ ಅವರ ಆರೋಪವನ್ನು ನಿರಾಕರಿಸಿದ್ದು, "ರಾಜಕೀಯವಾಗಿ ಚಾಲ್ತಿಯಲ್ಲಿರುವುದಕ್ಕೆ ಸಂಸದರೇ ಬಾಂಬ್ ಸ್ಫೋಟದ ನಾಟಕವಾಡಿದ್ದಾರೆ" ಎಂದು ಪ್ರತ್ಯಾರೋಪ ಮಾಡಿದೆ.
ಬುಧವಾರ ರಾಜ್ಯದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಎದುರು ಬಾಂಬ್ ಸ್ಫೋಟಗೊಂಡಿದ್ದ ಪ್ರಕರಣವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಘಟನೆಯನ್ನು ಖಂಡಿಸಿದ್ದರು.
ಪ. ಬಂಗಾಳದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಈ ಘಟನೆ ಸೂಚಿಸುತ್ತದೆ ಎಂದು ಜಗ್ ದೀಪ್ ಧನ್ಕರ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.