ಕೋಲ್ಕತ್ತಾ: ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುವುದು ತಮ್ಮ ವಿಧಿಯಾಗಿದ್ದು, ಬಿಜೆಪಿ ಉಪಚುನಾವಣೆಯ ಸಮಯದಲ್ಲಿ ಇಲ್ಲಿ ಅವಾಂತರಗಳನ್ನು ಸೃಷ್ಟಿಸಲು ಬೇರೆ ರಾಜ್ಯಗಳಿಂದ ಜನರನ್ನು ಕಳುಹಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಸೆಪ್ಟೆಂಬರ್ 30ರಂದು ನಡೆಯುವ ಉಪ ಚುನಾವಣೆಯಲ್ಲಿನ ಗೆಲುವು ತಾವು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನಿವಾರ್ಯವಾಗಿದ್ದು, ಕೇಂದ್ರ ಸರ್ಕಾರದ ಸಿಎಎ, ಎನ್ ಆರ್ ಸಿ, ನೋಟು ಅನಾಣ್ಯೀಕರಣ ಮತ್ತು ಬಿಜೆಪಿಯ ಇತರ ಜನ ವಿರೋಧಿ ನೀತಿಗಳ ವಿರುದ್ಧ ತಮ್ಮ ಹೋರಾಟ ಮುಂದುವರಿಸಲು ಈ ಗೆಲುವು ಅನಿವಾರ್ಯ ಮತ್ತು ತಮಗೆ ವಿಶೇಷ ಹೆಚ್ಚಿನ ಶಕ್ತಿ ನೀಡಲಿದೆ ಎಂದಿದ್ದಾರೆ.
ತನ್ನ ವಿಭಜಕ ಮತ್ತು ವಿನಾಶಕಾರಿ ನೀತಿಗಳಿಂದ ಬಿಜೆಪಿ ದೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರದಲ್ಲಿ ಅಧಿಕಾರದಿಂದ ಕಿತ್ತೊಗೆಯುವವರೆಗೂ ರಾಕ್ಷಸಿ ಪ್ರವೃತ್ತಿಯ ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಟಿಎಂಸಿ ನಾಯಕಿ ಮತದಾರರಿಗೆ ಮಾತು ಕೊಟ್ಟರು.
ಭವಾನಿಪುರ ಕ್ಷೇತ್ರದಲ್ಲಿ ಗೆದ್ದ ನಂತರ ಬೇರೆ ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸಿಕೊಂಡು ಸ್ವಾಮಿ ವಿವೇಕಾನಂದರ ತತ್ವದಂತೆ ಪ್ರತಿಯೊಬ್ಬರನ್ನೂ ತಮ್ಮ ಜೊತೆ ಕೊಂಡೊಯ್ಯುವ ಭರವಸೆ ನೀಡಿದರು.
ನಾನು 2014 ರಿಂದಲೂ ಕೇಂದ್ರದಲ್ಲಿರುವ ರಾಕ್ಷಸ ಪ್ರವೃತ್ತಿಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇನೆ, ಅದನ್ನು ಅಧಿಕಾರದಿಂದ ಹೊರಹಾಕುವವರೆಗೂ ಹೋರಾಟ ಮುಂದುವರಿಸುತ್ತೇನೆ. ದೇಶವನ್ನು ಸರಿಯಾಗಿ ನಡೆಸಲು ಸಾಧ್ಯವಾಗದವರು ಉಪಚುನಾವಣೆಯ ಸಮಯದಲ್ಲಿ ಇಲ್ಲಿ ಅವಾಂತರಗಳನ್ನು ಸೃಷ್ಟಿಸಲು ಬೇರೆ ರಾಜ್ಯಗಳಿಂದ ಜನರನ್ನು ಕಳುಹಿಸುತ್ತಿದ್ದಾರೆ. ನಾವು ಬಿಜೆಪಿಯ ವಿಭಜಕ ಮತ್ತು ವಿನಾಶಕಾರಿ ನೀತಿಗಳನ್ನು ಅನುಸರಿಸುವುದಿಲ್ಲ, ನಾವು ಸ್ವಾಮಿ ವಿವೇಕಾನಂದರ ತತ್ವಗಳನ್ನು ಅನುಸರಿಸುತ್ತೇವೆ ಎಂದು ನಿನ್ನೆ ಭವಾನಿಪುರ ಕ್ಷೇತ್ರದಲ್ಲಿ ಚುನಾವಣಾ ಸಭೆಯಲ್ಲಿ ಹೇಳಿದರು.
ಭವಾನಿಪುರ ಕ್ಷೇತ್ರದ ಉಪ ಚುನಾವಣೆ ಇದೇ 30ರಂದು ನಡೆಯಲಿದ್ದು ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕ ತಿಬ್ರೆವಾಲ್ ಮತ್ತು ಎಡರಂಗದಿಂದ ಸ್ರಿಜಿಬ್ ಬಿಸ್ವಾಸ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಮತ ಎಣಿಕೆ ಕಾರ್ಯ ಅಕ್ಟೋಬರ್ 3ರಂದು ನಡೆಯಲಿದೆ.
Advertisement