ಚುನಾವಣೆಯಲ್ಲಿ ಗೆದ್ದುಬೀಗಿ ಸರ್ಕಾರ ರಚಿಸಿದ ಬೆನ್ನಲ್ಲೇ ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!

ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸತತ 7ನೇ ಬಾರಿ ಸರ್ಕಾರ ರಚಿಸಿದೆ. ಗೆಲುವಿನ ಸಂಭ್ರಮದಲ್ಲಿ ಇನ್ನೂ ಕೇಸರಿಪಡೆ ಇದ್ದರೂ ಕೂಡ ಬಿಜೆಪಿಯಲ್ಲಿ ಭಿನ್ನಮತದ ಪ್ರತಿಧ್ವನಿ ಭಾರೀ ಸದ್ದುಮಾಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸತತ 7ನೇ ಬಾರಿ ಸರ್ಕಾರ ರಚಿಸಿದೆ. ಗೆಲುವಿನ ಸಂಭ್ರಮದಲ್ಲಿ ಇನ್ನೂ ಕೇಸರಿಪಡೆ ಇದ್ದರೂ ಕೂಡ ಬಿಜೆಪಿಯಲ್ಲಿ ಭಿನ್ನಮತದ ಪ್ರತಿಧ್ವನಿ ಭಾರೀ ಸದ್ದುಮಾಡುತ್ತಿದೆ. 

ಆಂತರಿಕ ಭಿನ್ನಾಭಿಪ್ರಾಯದ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಜಿ ರಾಜ್ಯ ಸಚಿವ ನಾಣು ವನನಿ ಅವರು ಮಾಡಿದ್ದು ಬಹಿರಂಗ ಪತ್ರ ಬರೆದಿದ್ದಾರೆ. ಪಕ್ಷದೊಳಗಿನ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಗುಜರಾತ್ ಬಿಜೆಪಿಯಲ್ಲಿ ಸಣ್ಣ ಕಾರ್ಯಕರ್ತರನ್ನು, ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಪ್ರಸ್ತುತ ಪರಿಸ್ಥಿತಿಯಿಂದ ನಾನು ವಿಚಲಿತನಾಗಿದ್ದೇನೆ ಎಂದು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 2022ರ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆತಂದ ರೀತಿಯ ಉತ್ಸಾಹವನ್ನು ನಾನು ಈ ಹಿಂದೆ ನೋಡಿರಲಿಲ್ಲ ಎಂದು ವನಾನಿ ಪತ್ರದಲ್ಲಿ ಹೇಳಿದ್ದಾರೆ.

ಈ ಬಾರಿ ಕಡಿಮೆ ಮತದಾನವಾಗಿರುವ ಬಗ್ಗೆ ಹಾಗೂ ಬಿಜೆಪಿಯ ಕಾರ್ಯವೈಖರಿ ಬಗ್ಗೆ ವನಾನಿ ಕಳವಳ ವ್ಯಕ್ತಪಡಿಸಿದ್ದಾರೆ. “ಪಕ್ಷವು ತನ್ನ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವ ಅಗತ್ಯವಿದೆ. ಪಕ್ಷದಲ್ಲಿ ಕಾಗದದ ಮೇಲೆ ಸಾಕಷ್ಟು ವರದಿಗಳು ನಡೆಯುತ್ತಿವೆ, ಆದರೆ ವಾಸ್ತವವು ಈ ವರದಿಗಳಿಗಿಂತ ಭಿನ್ನವಾಗಿದೆ. ಕೆಲವು ವ್ಯಕ್ತಿಗಳು ತುಂಬಾ ಶಕ್ತಿಶಾಲಿಯಾಗಿದ್ದಾರೆ. ಅವರ ಶಕ್ತಿಗೆ ಪಕ್ಷ ಶರಣಾಗುವುದು ಒಳ್ಳೆಯ ಲಕ್ಷಣವಲ್ಲ, ಇದು ಕಾರ್ಯಕರ್ತರನ್ನು ನಿರಾಶೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ಇತರ ಪಕ್ಷಗಳಿಂದ ರೆಡಿಮೇಡ್ ನಾಯಕರನ್ನು ಆಮದು ಮಾಡಿಕೊಳ್ಳುವ ವಿಧಾನವು ಕಾರ್ಯಕರ್ತರಿಗೆ ತಪ್ಪು ಸಂಕೇತಗಳನ್ನು ರವಾನಿಸುತ್ತಿದೆ ಎಂದಿದ್ದಾರೆ. 

ಇದೇ ಪ್ರಶ್ನೆಯನ್ನು ಇತರ ಬಿಜೆಪಿ ನಾಯಕರು ಎತ್ತಿದ್ದಾರೆ. ಕಾಂಕ್ರೇಜ್‌ನಲ್ಲಿ ಸೋತ ಕೀರ್ತಿಸಿನ್ಹ ವಘೇಲಾ, ಸ್ಥಳೀಯ ನಾಯಕರು ಪಕ್ಷದ ವಿರುದ್ಧ ಕೆಲಸ ಮಾಡಿದ್ದರಿಂದ ತಾವು ಪರಾಜಯ ಕಂಡಿದ್ದೇನೆ ಎಂದಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ವಘೇಲಾ, “ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಪಕ್ಷದ ಸದಸ್ಯರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಅವರು ಪಕ್ಷದ ವಿರುದ್ಧ ಕೆಲಸ ಮಾಡಿ ನಮಗೆ ಹಾನಿ ಮಾಡಿದ್ದಾರೆ. ಸೋಮನಾಥ್ ಕ್ಷೇತ್ರದಿಂದ ಸೋತ ಮನ್‌ಸಿನ್ಹ್ ಪರ್ಮಾರ್ ಕೂಡ, ಕೆಲವರು ದೇಶದ್ರೋಹಿಗಳಾಗಿದ್ದಾರೆ, ಪಕ್ಷವು ಅವರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ. ಪಠಾಣದಿಂದ ಸೋತ ರಾಜುಲ್ ದೇಸಾಯಿ ಅವರಿಂದಲೂ ಸ್ಥಳೀಯ ಮುಖಂಡರು ಹಾಗೂ ಪುರಸಭೆಯ ಮೇಲೆ ಆರೋಪ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com