ಚೀನಾ ಗಡಿ ಉದ್ವಿಗ್ನತೆ ಕುರಿತು ಚರ್ಚೆಗೆ ನಕಾರ; ರಾಜ್ಯಸಭೆಯ ದಿನದ ಕಲಾಪವನ್ನು ಬಹಿಷ್ಕರಿಸಿದ ಎಲ್ಲಾ ಪ್ರತಿಪಕ್ಷಗಳು
ನವದೆಹಲಿ: ಸದನದಲ್ಲಿ ಚೀನಾ ಗಡಿ ಉದ್ವಿಗ್ನತೆ ಕುರಿತಂತೆ ಚರ್ಚೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳು ಗುರುವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿದವು.
ಈ ಹಿಂದೆ ಅಧಿವೇಶನದ ವೇಳೆ ಬಿಜೆಪಿಯ ಸಭಾನಾಯಕ ಪಿಯೂಷ್ ಗೋಯಲ್ ಅವರು ಬಿಹಾರದ ಬಗ್ಗೆ ಮಾಡಿದ್ದ ಕೆಲವು ಟೀಕೆಗಳಿಗೆ ಅವರು ಆಕ್ಷೇಪ ಎತ್ತಿದರು.
ಬೆಳಗ್ಗಿನ ಅಧಿವೇಶನದಲ್ಲಿ (ಶೂನ್ಯ ವೇಳೆ) ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ತೊಡಗಿದವು. ಸದನದ ಬಾವಿಗೆ ಇಳಿದು, ಚೀನಾದೊಂದಿಗಿನ ಗಡಿ ಸಂಘರ್ಷದ ವಿಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಮತ್ತು ಗೋಯಲ್ ಅವರ ಹೇಳಿಕೆಯು ಬಿಹಾರಕ್ಕೆ 'ಅವಮಾನ' ಎಂದು ಆರೋಪಿಸಿದರು.
ಸಭಾಪತಿ ಜಗದೀಪ್ ಧನಕರ್ ಅವರು ಪ್ರತಿಭಟನಾನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಪದೇ ಪದೆ ಮನವಿ ಮಾಡಿದರೂ, ಪಟ್ಟು ಬಿಡದ ಸಂಸದರು ಘೋಷಣೆಗಳನ್ನು ಕೂಗುತ್ತಲೇ ಇದ್ದರು.
ಚೀನಾದೊಂದಿಗಿನ ಗಡಿ ಸಂಘರ್ಷದ ಕುರಿತು ಚರ್ಚೆಗೆ ನಾವು ಮೊದಲ ದಿನದಿಂದ ಒತ್ತಾಯಿಸುತ್ತಿದ್ದೇವೆ. ಆದರೆ, ಸರ್ಕಾರವು ಇದಕ್ಕೆ ಅವಕಾಶ ನೀಡುತ್ತಲೇ ಇಲ್ಲ. ಹೀಗಾಗಿ ಎಲ್ಲಾ ವಿಪಕ್ಷಗಳು ಇಂದು ಇಡೀ ದಿನ ಸದನದ ಕಲಾಪವನ್ನು ಬಹಿಷ್ಕರಿಸಲು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇತರ ವಿರೋಧ ಪಕ್ಷದ ಸದಸ್ಯರು ಸಹ ಚೀನಾದ ಗಡಿ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಮತ್ತು ಬಿಹಾರದ ಬಗ್ಗೆ ಹೇಳಿಕೆಗಾಗಿ ಸಭಾನಾಯಕರು ಕ್ಷಮೆಯಾಚಿಸಲು ಒತ್ತಾಯಿಸಿ ಕಲಾಪವನ್ನು ಬಹಿಷ್ಕರಿಸುವಲ್ಲಿ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದರು.
ಮಂಗಳವಾರ ಆರ್ಜೆಡಿ ಸಂಸದ ಮನೋಜ್ ಝಾ ಅವರು ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್ತಿನ ಅನುಮೋದನೆಯನ್ನು ಕೋರುವ ಧನವಿನಿಯೋಗ ಮಸೂದೆಗೆ ಒಪ್ಪಿಗೆ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದಾಗ ಗೋಯಲ್ ಈ ಹೇಳಿಕೆಯನ್ನು ನೀಡಿದರು.
ಬಡವರು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರವು ಸಮಾನ ಗಮನವನ್ನು ನೀಡಬೇಕು ಎಂದು ಅವರು ಹೇಳುತ್ತಿರುವಂತೆ ಪ್ರತಿಕ್ರಿಯಿಸಿದ ಗೋಯಲ್, 'ಇಂಕಾ ಬಾಸ್ ಚಲೇ ಟು ದೇಶ್ ಕೋ ಬಿಹಾರ್ ಬನಾ ದೀನ್ (ಅವರಿಗೆ ಅವಕಾಶ ಇದ್ದಿದ್ದರೆ, ಅವರು ದೇಶವನ್ನು ಬಿಹಾರವಾಗಿ ಪರಿವರ್ತಿಸುತ್ತಾರೆ) ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ