ಗುಜರಾತ್ ರಾಜ್ಯಾಧ್ಯಕ್ಷರ ರಾಜೀನಾಮೆಗೆ 16ಕ್ಕೂ ಹೆಚ್ಚು ಪರಾಜಿತ ಕಾಂಗ್ರೆಸ್ ಶಾಸಕರ ಒತ್ತಾಯ!
ಅಹಮದಾಬಾದ್: 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಸೋಲು ಅನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ನ 16ಕ್ಕೂ ಹೆಚ್ಚು ಪರಾಜಿತ ಶಾಸಕರು ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ನಿಮಿತ್ತ ನಡೆದ ಸಭೆಯಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ರಾಜ್ಯಾಧ್ಯಕ್ಷರ ರಾಜೀನಾಮೆಯ ನಂತರವೇ ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದ್ದಾರೆ. ಗುಜರಾತ್ ಕಾಂಗ್ರೆಸ್ ನಾಯಕರು ಡಿಸೆಂಬರ್ 23ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಭೇಟಿ ಮಾಡಿ ಗುಜರಾತ್ ಸೋಲಿನ ವರದಿಯನ್ನು ನೀಡಲಿದ್ದಾರೆ.
ಅದೇ ದಿನ ಗುಜರಾತ್ ಕಾಂಗ್ರೆಸ್ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ದೆಹಲಿ ಹೈಕಮಾಂಡ್ಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ್ ಠಾಕೂರ್ ಅವರು ಬುಧವಾರ ಕರೆದಿದ್ದ ಸಭೆಯಲ್ಲಿ ಪಕ್ಷದ ನಾಯಕರು ಸೋಲಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳು ಹಾಗೂ ತಾಲೂಕುಗಳನ್ನು ಒಳಗೊಂಡಂತೆ ಫೆಬ್ರವರಿಯಿಂದ ಪಾದ ಯಾತ್ರೆ ನಡೆಸಲು ಯೋಜಿಸಲು ಪಕ್ಷವು ಸಭೆ ಕರೆದಿತ್ತು. ಸಭೆಯಲ್ಲಿ 16ಕ್ಕೂ ಹೆಚ್ಚು ಶಾಸಕರು, ಜಿಲ್ಲಾ ಮತ್ತು ನಗರಾಧ್ಯಕ್ಷರು ಪಕ್ಷದ ಪದಾಧಿಕಾರಿಗಳ ವಿರುದ್ಧ ವಿಶೇಷವಾಗಿ ಪಕ್ಷದ ಅಧ್ಯಕ್ಷ ಜಗದೀಶ್ ಠಾಕೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ