ಮುಂಬೈ: ಭ್ರಷ್ಚಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಬುಧವಾರ ಜಾಮೀನಿನ ಮೇರೆಗೆ ಸುಮಾರು ಒಂದು ವರ್ಷದ ನಂತರ ಜೈಲಿನಿಂದ ಹೊರಗೆ ಬಂದರು.
ದೇಶಮುಖ್ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಾಮೀನು ಆದೇಶಕ್ಕೆ ತಡೆ ವಿಸ್ತರಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ಆದೇಶ ಹೊರಡಿಸಿತ್ತು. ಹೀಗಾಗಿ 73 ವರ್ಷದ ಎನ್ ಸಿಪಿ ನಾಯಕ ಇಂದು ಸಂಜೆ ಸುಮಾರು 4-45ರಲ್ಲಿ ಅರ್ಥೂರ್ ರಸ್ತೆ ಜೈಲಿನಿಂದ ಹೊರ ಬಂದರು. ಅಜಿತ್ ಪವಾರ್, ಜಯಂತ್ ಪಾಟೀಲ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
'ನ್ಯಾಯಾಂಗದಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ. ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂಬುದನ್ನು ಹೈಕೋರ್ಟ್ ಪರಿಗಣಿಸಿದೆ ಎಂದು ಅನಿಲ್ ದೇಶ್ ಮುಖ್ ಹೇಳಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವೆಂಬರ್ 2, 2021ರಲ್ಲಿ ಇಡಿ ದೇಶ್ ಮುಖ್ ಅವರನ್ನು ಮೊದಲಿಗೆ ಬಂಧಿಸಿತ್ತು. ಇದರ ಆಧಾರದ ಮೇಲೆ ಸಿಬಿಐ ಏಪ್ರಿಲ್ 21, 2021ರಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿತ್ತು.
Advertisement