ಆನೆ ಹಂತಕರ ರಕ್ಷಣೆ: ಮನೇಕಾ ಗಾಂಧಿ ಆರೋಪ ತಳ್ಳಿಹಾಕಿದ ಪ್ರಜ್ವಲ್ ರೇವಣ್ಣ
ನವದೆಹಲಿ: ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಹಾಸನ ಸಂಸದ ರೇವಣ್ಣ ತಳ್ಳಿಹಾಕಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ವೀರಾಪುರದಲ್ಲಿ ಆನೆಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿ ದಂತಗಳನ್ನು ತೆಗೆದ ಪ್ರಕರಣದಲ್ಲಿ ಹಂತಕರನ್ನು ಪ್ರಜ್ವಲ್ ರೇವಣ್ಣ ರಕ್ಷಿಸುತ್ತಿದ್ದಾರೆ ಎಂದು ಮನೇಕಾ ಗಾಂಧಿ ಆರೋಪಿಸಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಜ್ವಲ್ ರೇವಣ್ಣ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಅವರೇ ಈ ಬಗ್ಗೆ ಗಂಭೀರವಾದ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಈ ವಿಷಯವನ್ನು ವಿವರವಾಗಿ ಅಧ್ಯಯನ ಮಾಡಿದ ಬಳಿಕ ಮನೇಕಾ ಗಾಂಧಿ ಅವರು ವಿಷಯ ಪ್ರಸ್ತಾಪಿಸಬಹುದಾಗಿತ್ತು ಎಂದು ಹೇಳಿರುವ ಸಂಸದರು, ತಮಗೆ ಆನೆ ಸಾವನ್ನಪ್ಪಿದ್ದ ಮಾಹಿತಿ ತಿಳಿದಿತ್ತು. ಆದರೆ ದಂತ ತೆಗೆದು ಹೂತು ಹಾಕಿರುವ ಮಾಹಿತಿ ತಿಳಿದಿರಲಿಲ್ಲ ಎಂದಿದ್ದಾರೆ.
ನಾನು ಪ್ರಕರಣವನ್ನು ಹಾಸನ ನಗರಕ್ಕೆ ವರ್ಗಾಯಿಸುವಂತೆ ಪೊಲೀಸರಿಗೆ ಒತ್ತಡ ಹೇರಿರಲಿಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದು ಬಿಜೆಪಿ ಈ ಆರೋಪವನ್ನು ಸಾಬೀತುಪಡಿಸಿದಲ್ಲಿ ಯಾವುದೇ ಕ್ರಮ ಎದುರಿಸಲೂ ಸಿದ್ಧ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ