100 ಕೋಟಿ ರೂ.ಗೆ ರಾಜ್ಯಪಾಲರ ಹುದ್ದೆ, ರಾಜ್ಯಸಭಾ ಸ್ಥಾನದ ಭರವಸೆ ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ ಸಿಬಿಐ

ರಾಜ್ಯಸಭಾ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 100 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ಬಹು ರಾಜ್ಯಗಳ ವಂಚಕರ ಜಾಲವನ್ನು ಭೇದಿಸಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಜ್ಯಸಭಾ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 100 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ಬಹು ರಾಜ್ಯಗಳ ವಂಚಕರ ಜಾಲವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಬಿಐ ಶೋಧ ನಡೆಸಿದ್ದು, ಗ್ಯಾಂಗ್‌ನ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ಆರೋಪಿಯೊಬ್ಬ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಲಾತೂರ್‌ನ ಕಮಲಾಕರ್ ಪ್ರೇಮಕುಮಾರ್ ಬಂಡಗರ್, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ್ ನಾಯಕ್ ಮತ್ತು ದೆಹಲಿ-ಎನ್‌ಸಿಆರ್ ಮೂಲದ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಮತ್ತು ಮೊಹಮ್ಮದ್ ಐಜಾಜ್ ಖಾನ್ ಅವರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಹಣ ನೀಡಿದರೆ ರಾಜ್ಯಸಭೆಯ ಸ್ಥಾನಗಳ ವ್ಯವಸ್ಥೆ, ರಾಜ್ಯಪಾಲರ ಹುದ್ದೆ, ಕೇಂದ್ರ ಸರ್ಕಾರದ ಸಚಿವಾಲಯ ಮತ್ತು ಇತರೆ ಇಲಾಖೆಗಳ ಅಡಿಯಲ್ಲಿ ಬರುವ ಸರ್ಕಾರದ ವಿವಿಧ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಜನರಿಗೆ ಸುಳ್ಳು ಭರವಸೆ ನೀಡಿ ವಂಚಿಸುವ ಏಕೈಕ ಉದ್ದೇಶ ಹೊಂದಿದ್ದರು" ಎಂದು ಎಫ್ಐಆರ್ ನಲ್ಲಿ ಸಿಬಿಐ ಉಲ್ಲೇಖಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com