ಚೆನ್ನೈ: ಕೆಲವು ಷರತ್ತುಗಳೊಂದಿಗೆ ಪಥ ಸಂಚಲನ ನಡೆಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನಿರ್ಧರಿಸಿದ್ದು, ನವೆಂಬರ್ 6 ರಂದು ನಿಗದಿಯಾಗಿದ್ದ ಪಥ ಸಂಚಲನವನ್ನು ಶನಿವಾರ ಮುಂದೂಡಿದೆ.
"ಆಡಿಟೋರಿಯಂ ಅಥವಾ ಕಾಂಪೌಂಡ್ನ ನಾಲ್ಕು ಗೋಡೆಗಳ ಒಳಗೆ ಮಾತ್ರ ಪಥ ಸಂಚಲನ ನಡೆಸಬೇಕು ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇತರ ರಾಜ್ಯಗಳಲ್ಲಿ ಮಾಡಿದಂತೆ ಸಾರ್ವಜನಿಕ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲು ಅನುಮತಿ ಪಡೆಯಲು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ" ಎಂದು ಆರ್ಎಸ್ಎಸ್ ಮೂಲಗಳು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿವೆ.
ಇದೇ ವೇಳೆ ಹೇಳಿಕೆ ನೀಡಿರುವ ಆರ್ಎಸ್ಎಸ್ನ ದಕ್ಷಿಣ ವಲಯ ಅಧ್ಯಕ್ಷ ಆರ್.ವನ್ನಿಯರಾಜನ್, ಕಳೆದ 97 ವರ್ಷಗಳಿಂದ ತಮಿಳುನಾಡು ಸೇರಿದಂತೆ ದೇಶದಾದ್ಯಂತ ಶಾಂತಿಯುತವಾಗಿ ಆರ್ಎಸ್ಎಸ್ ತನ್ನ ಪಥ ಸಂಚಲನ ನಡೆಸುತ್ತಿದೆ ಎಂದಿದ್ದಾರೆ.
"ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮತ್ತು ಡಾ ಅಂಬೇಡ್ಕರ್ ಅವರ 125 ನೇ ಜನ್ಮದಿನದ ಅಂಗವಾಗಿ, ಆರ್ಎಸ್ಎಸ್ನ ತಮಿಳುನಾಡು ಘಟಕವು ಅಕ್ಟೋಬರ್ 2 ರಂದು 50 ಸ್ಥಳಗಳಲ್ಲಿ ಪಥ ಸಂಚಲನ ನಡೆಸಲು ಯೋಜಿಸಿತ್ತು ಮತ್ತು ಇದಕ್ಕಾಗಿ ಪೊಲೀಸರಿಂದ ಅನುಮತಿ ಕೇಳಲಾಗಿತ್ತು. ಆದರೆ ಪೊಲೀಸರು ತಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು ಎಂದು ವನ್ನಿಯರಾಜನ್ ತಿಳಿಸಿದ್ದಾರೆ.
Advertisement