ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಹೇಮಂತ್ ಕುಮಾರ್ ಲೋಹಿಯಾ ಅವರ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ಭಯೋತ್ಪಾದಕರ ಪಾತ್ರವಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್, ಆರೋಪಿಯ ವಿಚಾರಣೆ ಪ್ರಗತಿಯಲ್ಲಿದೆ ಮತ್ತು 1992ನೇ ಬ್ಯಾಚ್ ಐಪಿಎಸ್ ಅಧಿಕಾರಿ ಲೋಹಿಯಾ ಅವರು ಸೋಮವಾರ ತಡರಾತ್ರಿ ಜಮ್ಮುವಿನ ಹೊರವಲಯದಲ್ಲಿರುವ ಗೆಳೆಯನ ಮನೆಯಲ್ಲಿ ಕತ್ತು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಹೇಳಿದರು.
ಆರೋಪಿ 23 ವರ್ಷದ ಯಾಸಿರ್ ಲೋಹರ್ ಲೋಹಿಯಾ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ. ತಲೆಮರೆಸಿಕೊಂಡಿದ್ದ ಆತನನ್ನು ಮಂಗಳವಾರ ಕಂಚಕ್ನ ಹೊಲವೊಂದರಲ್ಲಿ ಬಂಧಿಸಲಾಯಿತು.
'ಹೇಮಂತ್ ಕುಮಾರ್ ಲೋಹಿಯಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ಭಯೋತ್ಪಾದಕರ ಪಾತ್ರವಿರುವ ಕುರಿತು ತಿಳಿದುಬಂದಿಲ್ಲ. ಸದ್ಯ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದೆ' ಎಂದು ಎಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಯಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಆದಾಗ್ಯೂ, ಮಂಗಳವಾರ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, 'ಈ ಭಯೋತ್ಪಾದಕ ಗುಂಪುಗಳು ನಾಚಿಕೆಯಿಲ್ಲದೆ ಎಲ್ಲವನ್ನೂ ಮತ್ತು ಯಾವುದನ್ನಾದರೂ ತನ್ನ ಕೃತ್ಯ ಎಂದು ಹೇಳಿಕೊಳ್ಳುತ್ತಿವೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದರು.
ಕಾನೂನು ಮತ್ತು ವೈದ್ಯಕೀಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಕೊಲೆಯಾದ ಅಧಿಕಾರಿಯ ದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆಗೂ ಮುನ್ನ ಇಲ್ಲಿನ ಜಿಲ್ಲಾ ಪೊಲೀಸ್ ಲೈನ್ಗಳಲ್ಲಿ ಪುಷ್ಪಾರ್ಚನೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
Advertisement