ಚಂಡೀಗಢ: ಸೋನಿಪತ್ ಮೂಲದ ಸಂಸ್ಥೆಯೊಂದು ತಯಾರಿಸಿದ ನಾಲ್ಕು ಕೆಮ್ಮಿನ ಸಿರಪ್ಗಳ ಮಾದರಿಗಳನ್ನು ಪರೀಕ್ಷೆಗಾಗಿ ಕೋಲ್ಕತ್ತಾದ ಕೇಂದ್ರೀಯ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಗುರುವಾರ ಹೇಳಿದ್ದಾರೆ.
ಗ್ಯಾಂಬಿಯಾದಲ್ಲಿ ಸಿರಫ್ ಸೇವಿಸಿದ ಬಳಿಕ ಮೃತಪಟ್ಟ 66 ಮಕ್ಕಳ ಸಾವಿಗೆ ಈ ಕೆಮ್ಮಿನ ಸಿರಫ್ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ನಂತರ ಹರಿಯಾಣ ಸರ್ಕಾರ ಸಿರಪ್ಗಳ ಮಾದರಿಯನ್ನು ಕೋಲ್ಕತ್ತಾ ಲ್ಯಾಬ್ಗೆ ಕಳುಹಿಸಿದೆ.
ಹರ್ಯಾಣದ ಸೋನೆಪತ್ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ತಯಾರಿಸಿದೆ ಎನ್ನಲಾದ ನಾಲ್ಕು "ಕಲುಷಿತ" ಮತ್ತು "ಕೆಳಮಟ್ಟದ" ಕೆಮ್ಮು ಸಿರಪ್ಗಳು ಪಶ್ಚಿಮ ಆಫ್ರಿಕಾದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಬುಧವಾರ ಎಚ್ಚರಿಕೆ ನೀಡಿತ್ತು.
ಭಾರತದ ಔಷಧಿ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ.
"ಮಾದರಿಗಳನ್ನು ಡಿಸಿಜಿಎ ಮತ್ತು ಹರಿಯಾಣದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ತಂಡ ಸಂಗ್ರಹಿಸಿದೆ ಮತ್ತು ಪರೀಕ್ಷೆಗಾಗಿ ಕೋಲ್ಕತ್ತಾದ ಸಿಡಿಎಲ್ಗೆ ಕಳುಹಿಸಲಾಗಿದೆ" ಎಂದು ಅನಿಲ್ ವಿಜ್ ಅವರು ಫೋನ್ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರದ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಆರೋಗ್ಯ) ಅವರೊಂದಿಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement