ಯುಪಿ ಪೊಲೀಸರು ಹಲವು ಬಾರಿ 'ಮುಗ್ಧರನ್ನು' ಬಂಧಿಸಿದ್ದಾರೆ: ಉತ್ತರಾಖಂಡ ಉನ್ನತ ಅಧಿಕಾರಿ
ಲಖನೌ: ಮರಳು ಗಣಿಗಾರಿಕೆ ಮಾಫಿಯಾದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಗುಡ್ಡಗಾಡು ಪ್ರದೇಶದಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದ ವಿಫಲ ದಾಳಿಯ ನಂತರ ಉತ್ತರಾಖಂಡದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಅವರು ಸೋಮವಾರ ಯುಪಿ ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರಾಖಂಡದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ, ಅಪರಾಧಗಳನ್ನು ಸರಿಯಾಗಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ನಿರಪರಾಧಿಗಳಲ್ಲ ಎಂದಿದ್ದಾರೆ.
"ಹಲವು ಬಾರಿ ಉತ್ತರ ಪ್ರದೇಶ ಪೊಲೀಸರು ಅಮಾಯಕರನ್ನು ಹಿಡಿದು ಅವರು ತಪ್ಪಿತಸ್ಥರೆಂದು ಹೇಳಿಕೊಳ್ಳುತ್ತಾರೆ. ಅದು ಹಾಗಾಗಬಾರದು. ಒಬ್ಬ ಅಮಾಯಕನನ್ನು ಹಿಡಿಯುವುದು ಇನ್ನೂ 99 ಅಪರಾಧಿಗಳ ಉದಯಕ್ಕೆ ಕಾರಣವಾಗಬಹುದು" ಎಂದು ಎಚ್ಚರಿಸಿದ್ದಾರೆ.
ರಾಧಾ ರಾತುರಿ ಹೇಳಿಕೆ ವಿಷಾದನೀಯ ಎಂದ ಉತ್ತರ ಪ್ರದೇಶ ಪೊಲೀಸರು, ಇದೊಂದು "ಬೇಜವಾಬ್ದಾರಿ" ಹೇಳಿಕೆ ಮತ್ತು ಉನ್ನತ ಅಧಿಕಾರಿಗಳು ಅಂತಹ ಕಾಮೆಂಟ್ಗಳಿಂದ ದೂರವಿರಬೇಕು ಎಂದಿದ್ದಾರೆ.
ಉತ್ತರಾಖಂಡ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆಯನ್ನು ಗಮನಿಸಿದ್ದು, ಅವರು
ವಾಸ್ತವಾಂಶ ತಿಳಿಯದೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಲಖನೌದಲ್ಲಿ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ತಿರುಗೇಟು ನೀಡಿದ್ದಾರೆ.