ಕೇವಲ ಕಾರ್ಯಕ್ರಮ ಉದ್ಘಾಟಿಸುವುದಲ್ಲ, ಭರವಸೆ ನೀಡಿದ್ದ 16 ಕೋಟಿ ಉದ್ಯೋಗಗಳನ್ನು ಯಾವಾಗ ನೀಡುವಿರಿ: ಕಾಂಗ್ರೆಸ್

ಕೇಂದ್ರ ಸರ್ಕಾರದ 'ರೋಜ್‌ಗಾರ್‌ ಮೇಳ'ವನ್ನು ಜುಮ್ಲಾ ರಾಜನ 'ಈವೆಂಟ್‌ಬಾಜಿ' ಎಂದು ಕರೆದಿರುವ ಕಾಂಗ್ರೆಸ್, ದೇಶದ ಯುವಕರಿಗೆ 16 ಕೋಟಿ ಉದ್ಯೋಗಗಳನ್ನು ಯಾವಾಗ ಒದಗಿಸಲಾಗುತ್ತದೆ ಎಂದು ಶನಿವಾರ ಕೇಳಿದೆ.
ರಣದೀಪ್ ಸುರ್ಜೇವಾಲಾ
ರಣದೀಪ್ ಸುರ್ಜೇವಾಲಾ

ನವದೆಹಲಿ: ಕೇಂದ್ರ ಸರ್ಕಾರದ 'ರೋಜ್‌ಗಾರ್‌ ಮೇಳ'ವನ್ನು ಜುಮ್ಲಾ ರಾಜನ 'ಈವೆಂಟ್‌ಬಾಜಿ' ಎಂದು ಕರೆದಿರುವ ಕಾಂಗ್ರೆಸ್, ದೇಶದ ಯುವಕರಿಗೆ 16 ಕೋಟಿ ಉದ್ಯೋಗಗಳನ್ನು ಯಾವಾಗ ಒದಗಿಸಲಾಗುತ್ತದೆ ಎಂದು ಶನಿವಾರ ಕೇಳಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ಅಧಿಕಾರಕ್ಕೇರಿದ್ದರು. ಆದರೆ, ಕಳೆದ ಎಂಟು ವರ್ಷಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿಲ್ಲ ಎಂದು ಆರೋಪಿಸಿದರು.

ಭಾರತ್ ಜೋಡೋ ಯಾತ್ರೆಯು ಕೇವಲ ನಾಲ್ಕು ರಾಜ್ಯಗಳಿಗೆ ತೆರಳಿದೆ ಮತ್ತು ನಿರುದ್ಯೋಗವು ದೇಶವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂಬುದನ್ನು ಸರ್ಕಾರ 'ಒಪ್ಪಿಕೊಳ್ಳಬೇಕಾಗಿದೆ' ಎಂದು ರಾಹುಲ್ ಗಾಂಧಿ ಒತ್ತಾಯಿಸುತ್ತಿದ್ದಾರೆ. ಕನಿಷ್ಠ ನಿರುದ್ಯೋಗವು ದೇಶ ಮತ್ತು ಯುವಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದು ಜುಮ್ಲಾ ರಾಜ ಒಪ್ಪಿಕೊಳ್ಳಬೇಕು ಎಂದು ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದು, ಇದು ಭಾರತ್ ಜೋಡೋ ಯಾತ್ರೆಯ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.

ಇವೆಂಟ್‌ಬಾಜಿ ಬೇಡ, ಉದ್ಯೋಗ ಕೊಡಿ’ ಎಂದ ಅವರು, ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ನೀವು 16 ಕೋಟಿ ಉದ್ಯೋಗಗಳನ್ನು ಯಾವಾಗ ನೀಡುತ್ತೀರಿ ಎಂದು ಪ್ರಧಾನಿ ಮೋದಿ ಹೇಳಬೇಕು. ಈ 16 ಕೋಟಿ ಉದ್ಯೋಗಗಳನ್ನು ಯಾವಾಗ ಒದಗಿಸಲಾಗುವುದು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು ಎಂಬುದನ್ನು ದೇಶದ ಯುವಕರಿಗೆ ಪ್ರಧಾನಿ ಮೋದಿ ಉತ್ತರಿಸಬೇಕಾಗಿದೆ ಎಂದು ಅವರು ಟ್ವಿಟರ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಕೇವಲ 70,000 ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಈ ವಿಚಾರಗಳು ಮುಚ್ಚಿಹೋಗುವುದಿಲ್ಲ ಮತ್ತು ದೇಶದ ಯುವಕರು ಉದ್ಯೋಗವನ್ನು ಬಯಸುತ್ತಾರೆ ಮತ್ತು ಪ್ರಧಾನಿ ಅವರಿಗೆ ಉತ್ತರಿಸಬೇಕು. ತಾವೇ ಭರವಸೆ ನೀಡಿರುವ ಉದ್ಯೋಗಗಳನ್ನು ಯಾವಾಗ ಒದಗಿಸಲಾಗುವುದು ಎಂದು ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

ಮೋದಿ  ಸರ್ಕಾರವು ರೈತರನ್ನು ವಂಚಿಸುತ್ತಿದೆ. ರಾಬಿ ಬೆಳೆಗಳಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯು (ಎಂಎಸ್‌ಪಿ) ಹಣದುಬ್ಬರ ದರಕ್ಕಿಂತ ಕಡಿಮೆಯಾಗಿದೆ ಮತ್ತು ಅವರ ಶ್ರಮವು ದೀಪಾವಳಿಯ ಬೆಳಕಿನಲ್ಲಿ ಕರಗಿಹೋಗಿದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರ ರಾಬಿ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಳ ಮಾಡುವ ಮೂಲಕ ಬೆನ್ನು ತಟ್ಟಿದೆ, ಆದರೆ ರೈತರಿಗೆ ವಂಚನೆ ಮಾಡಿದೆ. ಅವರು ರಕ್ತ ಕಣ್ಣೀರು ಸುರಿಸುವಂತೆ ಮಾಡಿಬಿಟ್ಟರು ಎಂದು ಅವರು ಹಿಂದಿಯಲ್ಲಿ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

10 ಲಕ್ಷ ಜನರನ್ನು ನೇಮಿಸಿಕೊಳ್ಳುವ ‘ರೋಜ್‌ಗಾರ್ ಮೇಳ’ ಅಭಿಯಾನಕ್ಕೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು.

ಇದಕ್ಕೂ ಮುನ್ನ ಪ್ರಧಾನಿಯವರು 75,000 ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com