ಮುಂಬೈ: ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರ ಅಧಿಕಾರದಲ್ಲಿದ್ದಾಗ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗುಜರಾತ್ನಲ್ಲಿ ಟಾಟಾ-ಏರ್ಬಸ್ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿತ್ತು ಎಂದು ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಅವರು ಶುಕ್ರವಾರ ಹೇಳಿದ್ದಾರೆ.
ಯೋಜನೆಯ ಕುರಿತು ‘ಗೊಂದಲ’ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಕೈಗಾರಿಕಾ ಸಚಿವ ಸಾಮಂತ್ ಅವರು, ಗುಜರಾತ್ನಲ್ಲಿ ವಿಮಾನ ಘಟಕವನ್ನು ಸ್ಥಾಪಿಸುವ ತಿಳುವಳಿಕೆ ಒಪ್ಪಂದಕ್ಕೆ(ಎಂಒಯು) ಕೇಂದ್ರ ಸರ್ಕಾರ ಸೆಪ್ಟೆಂಬರ್ 2021 ರಲ್ಲಿ ಸಹಿ ಹಾಕಿದೆ ಎಂದು ತಿಳಿಸಿದರು.
ವೇದಾಂತ-ಫಾಕ್ಸ್ಕಾನ್ ಯೋಜನೆಯಾಗಲಿ ಅಥವಾ ಟಾಟಾ-ಏರ್ಬಸ್ ಯೋಜನೆಯಾಗಲಿ, ಈ ವರ್ಷ ಜೂನ್ ಅಂತ್ಯದಲ್ಲಿ ಈ (ಏಕನಾಥ್ ಶಿಂಧೆ ನೇತೃತ್ವದ) ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಈ ಯೋಜನೆಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿಪಕ್ಷಗಳಿಗೆ ಸರ್ಕಾರವನ್ನು ಟೀಕೆ ಮಾಡುವುದು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ" ಎಂದು ತಿರುಗೇಟು ನೀಡಿದರು.
"ಕೇಂದ್ರ ಸರ್ಕಾರವು ಸೆಪ್ಟೆಂಬರ್ 2021 ರಂದು ಎಂಒಯುಗೆ ಸಹಿ ಹಾಕಿದೆ ಮತ್ತು ಕಂಪನಿಯು ಯೋಜನೆಯನ್ನು ಗುಜರಾತ್ಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ" ಎಂದು ಅವರು ಹೇಳಿದರು.
ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಸೇನಾ ನಾಯಕ, ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು, ಮಹಾರಾಷ್ಟ್ರಕ್ಕೆ ಬರಬೇಕಿದ್ದ ಟಾಟಾ-ಏರ್ಬಸ್ ಯೋಜನೆ ಪಕ್ಕದ ರಾಜ್ಯಕ್ಕೆ ಏಕೆ ಹೋಗಿದೆ ಎಂದು ಪ್ರಶ್ನಿಸಿದ್ದರು.
ಟಾಟಾ ಕಂಪನಿ ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್ ಮೂಲದ ಏರ್ಬಸ್ ಜೊತೆಗೂಡಿ ಮೇಕ್ ಇನ್ ಇಂಡಿಯಾ ವಾಯುಸೇನೆಗೆ ಸಿ-295MW ವಿಮಾನವನ್ನು ನಿರ್ಮಾಣ ಮಾಡಲಿದೆ.
ಗುಜರಾತಿನ ವಡೋದರಾದಲ್ಲಿ ಟಾಟಾ-ಏರ್ಬಸ್ ವಿಮಾನ ನಿರ್ಮಾಣ ಘಟಕ ಸ್ಥಾಪಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 30 ರಂದು ಇದಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.
Advertisement