ಭಾರತ ಯುವ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ವಿಕಿಪೀಡಿಯಾದಲ್ಲಿ 'ಖಲಿಸ್ತಾನ್' ಪದ: ಕೇಂದ್ರದಿಂದ ಸಮನ್ಸ್

ಭಾರತ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟದಲ್ಲಿ ಖಲಿಸ್ತಾನಿ ಪದವನ್ನು ಸೇರಿಸಿದ್ದ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು ವಿಕಿಪೀಡಿಯಾಗೆ ಸಮನ್ಸ್ ನೀಡಿದೆ.
ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್

ನವದೆಹಲಿ: ಭಾರತ ಕ್ರಿಕೆಟಿಗ ಅರ್ಷ್‌ದೀಪ್ ಸಿಂಗ್ ಅವರ ವಿಕಿಪೀಡಿಯಾ ಪುಟದಲ್ಲಿ ಖಲಿಸ್ತಾನಿ ಪದವನ್ನು ಸೇರಿಸಿದ್ದ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇಂದು ವಿಕಿಪೀಡಿಯಾಗೆ ಸಮನ್ಸ್ ನೀಡಿದೆ.

ಭಾರತ ಎಂಬ ಜಾಗದಲ್ಲಿ ಖಲಿಸ್ತಾನ್ ಪದ ಬಳಕೆ ಬಗ್ಗೆ ವಿವರ ಕೇಳಿ ಕಾರ್ಯನಿರ್ವಾಹಕರಿಗೆ ನೋಟಿಸ್ ನೀಡಿದೆ. ಈ ತಪ್ಪು ಮಾಹಿತಿಯು ಕೋಮು ಸೌಹಾರ್ದತೆಯನ್ನು ಕದಡಬಹುದು ಮತ್ತು ಕ್ರಿಕೆಟಿಗನ ಕುಟುಂಬಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗೆ ಕಾರಣವಾಗಬಹುದು ಎಂದು ಕೇಂದ್ರವು ಹೇಳಿದೆ.

ಈ ಬಗ್ಗೆ ಉನ್ನತ ಮಟ್ಟದ ಸಮಿತಿಯು ಮುನ್ನೆಚ್ಚರಿಕೆಯ ಪರಿಶೀಲನೆಗಳ ಕುರಿತು ಎನ್‌ಸೈಕ್ಲೋಪೀಡಿಯಾದ ಕಾರ್ಯನಿರ್ವಾಹಕರನ್ನು ಪ್ರಶ್ನೆ ಮಾಡುವ ಸಾಧ್ಯತೆಯಿದೆ ಮತ್ತು ಶೋಕಾಸ್ ನೋಟಿಸ್ ಅನ್ನು ಸಹ ನೀಡಬಹುದು.

ಅರ್ಷ್‌ದೀಪ್ ಸಿಂಗ್ ವಿಕಿಪೀಡಿಯಾ ಪುಟದಲ್ಲಿ ನೋಂದಾಯಿಸದ ಬಳಕೆದಾರರು 'ಇಂಡಿಯಾ' ಪದವನ್ನು 'ಖಲಿಸ್ತಾನ್' ಎಂದು ಬದಲಾಯಿಸಿದ್ದಾರೆ. ಆದರೆ ಈ ಬದಲಾವಣೆಗಳನ್ನು ವಿಕಿಪೀಡಿಯಾ ಸಂಪಾದಕರು 15 ನಿಮಿಷಗಳಲ್ಲಿ ರದ್ದುಗೊಳಿಸಿದ್ದಾರೆ.

ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಮಾಂಚಕ ಸೂಪರ್ 4 ಏಷ್ಯಾಕಪ್ ಪಂದ್ಯದ ವೇಳೆ ನಿರ್ಣಾಯಕ ಕ್ಯಾಚ್ ಅನ್ನು ಕೈಬಿಟ್ಟ ನಂತರ ಅರ್ಷದೀಪ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾದರು. ಭಾರತದ ವೇಗಿ ಅರ್ಷ್‌ದೀಪ್ ಸಿಂಗ್ ಅವರು 18 ನೇ ಓವರ್‌ನಲ್ಲಿ ಆಸಿಫ್ ಅಲಿ ಅವರ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಮೈದಾನದಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಪಂದ್ಯವನ್ನು ಪಾಕಿಸ್ತಾನ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಭಾರತದ ಬ್ಯಾಟರ್ ಮತ್ತು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಷ್‌ದೀಪ್ ಸಿಂಗ್ ಅವರನ್ನು ಬೆಂಬಲಿಸಿದ್ದಾರೆ. ಹೆಚ್ಚಿನ ಒತ್ತಡದ ಆಟದಲ್ಲಿ ಯಾರಾದರೂ ತಪ್ಪುಗಳನ್ನು ಮಾಡಬಹುದು ಮತ್ತು ಅವರಿಂದ ಕಲಿಯುವುದು ಮುಖ್ಯ ಎಂದು ಹೇಳಿದರು.

ಅರ್ಷ್‌ದೀಪ್ ಸಿಂಗ್ ಅವರ ಕೆಟ್ಟ ಟ್ರೋಲಿಂಗ್ ಅನ್ನು ಖಂಡಿಸಿದ ಹಲವಾರು ಮಾಜಿ ಕ್ರಿಕೆಟಿಗರು ಅರ್ಷ್‌ದೀಪ್ ಗೆ ಬೆಂಬಲ ತೋರಿದ್ದಾರೆ. ಕೆಲ ಅಭಿಮಾನಿಗಳು ಕೂಡ ಭಾರತದ ಯುವ ವೇಗಿ ಬೆಂಬಲಕ್ಕೆ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com