ನವದೆಹಲಿ: ಅಬಕಾರಿ ಹಗರಣದಲ್ಲಿ ತನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಹೇಳಿಕೆಯನನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಸ್ಪಷ್ಟವಾಗಿ ತಳ್ಳಿಹಾಕಿದೆ.
ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಉಪ ಕಾನೂನು ಸಲಹೆಗಾರ ಜಿತೇಂದ್ರ ಕುಮಾರ್ ಅವರಿಗೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸುವಂತೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಸಿಸೋಡಿಯಾ ಆರೋಪಿಸಿದ್ದರು.
ಸಿಸೋಡಿಯಾ ಆರೋಪ ತಳ್ಳಿಹಾಕಿದ ಸಿಬಿಐ, ದೆಹಲಿಯ ಅಬಕಾರಿ ‘ಹಗರಣ’ದ ತನಿಖೆಗೂ ಜಿತೇಂದ್ರ ಕುಮಾರ್ ಅವರಿಗೂ ಅಬಕಾರಿ ಹಗರಣದ ತನಿಖೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಸಿಸೋಡಿಯಾ ಅವರ ಹೇಳಿಕೆ ತಪ್ಪುದಾರಿಗೆಳೆಯುವಂತೆ ಮಾಡುತ್ತಿದೆ. ಈ ಹೇಳಿಕೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಸಿಬಿಐ ಹೇಳಿದೆ.
"ಸಿಸೋಡಿಯಾ ಅವರ ಈ ಚೇಷ್ಟೆಯ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಸಿಬಿಐ ಬಲವಾಗಿ ಅಲ್ಲಗಳೆಯುತ್ತದೆ. ಸಜ್ಜನ ಅಧಿಕಾರಿ ದಿವಂಗತ ಜಿತೇಂದ್ರ ಕುಮಾರ್ ಅವರು ಈ ಪ್ರಕರಣದ ತನಿಖೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅವರು ಪ್ರಾಸಿಕ್ಯೂಷನ್ ಉಸ್ತುವಾರಿ ಉಪ ಕಾನೂನು ಸಲಹೆಗಾರರಾಗಿದ್ದರು. ಅವರು ದೆಹಲಿಯಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಪ್ರಾಸಿಕ್ಯೂಟರ್ಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
Advertisement