ತಿರುವನಂತಪುರದಲ್ಲಿ ಮೂವರು ನಾಪತ್ತೆಯಾದ ಸ್ಥಳ
ತಿರುವನಂತಪುರದಲ್ಲಿ ಮೂವರು ನಾಪತ್ತೆಯಾದ ಸ್ಥಳ

ಭಾರಿ ಮಳೆಯಿಂದ ಮೂವರು ಸಾವು; ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಮಂಗಳವಾರ ರೆಡ್ ಅಲರ್ಟ್ ಘೋಷಣೆ

ಕೇರಳದ ವಿವಿಧೆಡೆ ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
Published on

ತಿರುವನಂತಪುರ: ಕೇರಳದ ವಿವಿಧೆಡೆ ಸೋಮವಾರ ಸುರಿದ ಭಾರಿ ಮಳೆಗೆ ಮೂವರು ಮೀನುಗಾರರು ಮೃತಪಟ್ಟಿದ್ದು, ಮತ್ತೆ ಮೂವರು ನಾಪತ್ತೆಯಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ತಿರುವನಂತಪುರದ ಪೆರುಮಥುರಾ ಕರಾವಳಿಯಲ್ಲಿ ದೋಣಿ ಮುಳುಗಿ ಇಬ್ಬರು ಮೀನುಗಾರರು ನೀರಿನಲ್ಲಿ ಮುಳುಗಿದ್ದಾರೆ. ಘಟನೆಯಲ್ಲಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಶೋಧ ನಡೆಯುತ್ತಿದೆ. ಈಮಧ್ಯೆ, ಆಲಪ್ಪುಳದಲ್ಲಿ ಮೀನುಗಾರರೊಬ್ಬರು ದೋಣಿಯನ್ನು ದಡಕ್ಕೆ ತರಲು ಪ್ರಯತ್ನಿಸುತ್ತಿರುವಾಗ ಹಗ್ಗಕ್ಕೆ ಕಾಲು ಸಿಲುಕಿ ಅಂಬಲಪ್ಪುಳದ ಸಂತೋಷ್ (40) ಎಂಬುವವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ತಿರುವನಂತಪುರಂನ ಗುಡ್ಡಗಾಡು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಯಿತು. ಅಧಿಕಾರಿಗಳು ಕೆಲವು ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ತಿರುವನಂತಪುರಂನಲ್ಲಿ ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಆದೇಶದವರೆಗೆ ಪೊನ್ಮುಡಿ, ಕಲ್ಲಾರ್ ಮತ್ತು ಮಂಕಯಂನಲ್ಲಿನ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ಮುಚ್ಚುವಂತೆ ವಿಭಾಗೀಯ ಅರಣ್ಯಾಧಿಕಾರಿ ಆದೇಶಿಸಿದ್ದಾರೆ.

ತಮಿಳುನಾಡಿನ ತಿರುನೆಲ್ವೇಲಿಯಿಂದ ಬಂದಿದ್ದ ಮೂವರು ಪ್ರವಾಸಿಗರ ತಂಡದ ಕಾರು ತಿರುವನಂತಪುರಂನ ಮೀನ್‌ಮುಟ್ಟಿ ಜಲಪಾತದ ಬಳಿಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಸ್ವಲ್ಪದರಲ್ಲೇ ಅವರು ಪಾರಾಗಿದ್ದಾರೆ. ಕೊಚ್ಚಿಹೋಗುತ್ತಿದ್ದ ಕಾರನ್ನು ಕಂಡು ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ.

ಸೋಮವಾರ ತಡರಾತ್ರಿವರೆಗೂ ಕಲ್ಲಾರ್-ಮೀನ್‌ಮುಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿದಿದೆ. ಪಾಲಕ್ಕಾಡ್‌ನ ಕಲ್ಲಾಡಿಕೋಡ್‌ನಲ್ಲಿಯೂ ಪ್ರವಾಹದ ವರದಿಯಾಗಿದೆ. ಪಾಲಕ್ಕಾಡ್-ಕೋಯಿಕ್ಕೋಡ್ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಎರ್ನಾಕುಲಂನಲ್ಲಿ ಸಂಜೆ ಸಾಧಾರಣದಿಂದ ಭಾರಿ ಮಳೆಯಾಗಿದೆ.

*ಕೆಂಪು: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಇಡುಕ್ಕಿ (204.4ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ)

*ಕಿತ್ತಳೆ : ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ (64.5ಮಿ.ಮೀ ಮತ್ತು 204.4 ಮಿ.ಮೀ ನಡುವೆ ಭಾರಿ ಮಳೆಯಿಂದ ಅತಿ ಭಾರಿ ಮಳೆ)

*ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ

*ರಾಜಧಾನಿಯಲ್ಲಿ ಇಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಗುಡ್ಡಗಾಡು ಪ್ರದೇಶಗಳು, ನದಿ ದಡಗಳು ಮತ್ತು ಸಮುದ್ರ ತೀರಗಳಲ್ಲಿ ಕಲ್ಲುಗಣಿಗಾರಿಕೆ, ಗಣಿಗಾರಿಕೆ ಮತ್ತು ಅನಿವಾರ್ಯವಲ್ಲದ ಪ್ರಯಾಣ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com