ಪಾಟ್ನ: ಪ್ರಧಾನಿ ನೇತೃತ್ವದಲ್ಲಿ ಭಾನುವಾರ ನಡೆದ ನೀತಿ ಆಯೋಗದ ಸಭೆಗೆ ಎನ್ ಡಿಎ ಮಿತ್ರಪಕ್ಷವೂ ಆದ ಜೆಡಿಯು ಸಿಎಂ ನಿತೀಶ್ ಕುಮಾರ್ ಗೈರು ಹಾಜರಾಗಿದ್ದದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ಈಗ ಜೆಡಿಯು-ಬಿಜೆಪಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದ್ದು, ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸುತ್ತಿರುವ ಆರೋಪ ಮಾಡಿದ್ದಾರೆ.
ಜೆಡಿಯು ಸದಸ್ಯ ಆರ್ ಸಿಪಿ ಸಿಂಗ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಯಿಂದ ತೆರವುಗೊಂಡಿರುವ ಸ್ಥಾನಕ್ಕೆ ಮತ್ತೆ ತಮ್ಮ ಪಕ್ಷದವರು ಸೇರುವುದಿಲ್ಲ ಎಂದು ಜೆಡಿಯು ರಾಷ್ಟ್ರಾಧ್ಯಕ್ಷ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ. ಆದರೆ ರಾಜ್ಯದಲ್ಲಿ ಎನ್ ಡಿಎ ಭಾಗವಾಗಿ ಜೆಡಿಯು ಮುಂದುವರೆಯಲಿದೆ. ನಾವು ಈ ವಿಷಯವಾಗಿ ಹಿಂದಿನ ನಿಲುವಿಗೆ ಬದ್ಧರಾಗಿರಲಿದ್ದೇವೆ, ಸ್ಥಳೀಯ ಬಿಜೆಪಿಯಲ್ಲಿ ಚಿರಾಗ್ ಪಾಸ್ವಾನ್ ಮಾದರಿಯನ್ನೇ ಅನುಸರಿಸಿ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದು, ಸೂಕ್ತ ಸಮಯದಲ್ಲಿ ಬಯಲಿಗೆಳೆಯುವುದಾಗಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಜೆಡಿಯು ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದಿದ್ದ ಆರ್ ಸಿಪಿ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಜೆಡಿಯು ತೇಲುತ್ತಿರುವ ಹಡಗು ಎಂದಿದ್ದಾರೆ.
Advertisement