ಹೈದ್ರಾಬಾದ್: ರಾಷ್ಟ್ರ ರಾಜಧಾನಿ ದೆಹಲಿ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮದ್ಯನೀತಿ ಪ್ರಕರಣದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ವಿಧಾನಪರಿಷತ್ ಸದಸ್ಯೆ ಕೆ ಕವಿತಾ ಅವರು ಲಿಕ್ಕರ್ ಮಾಫಿಯಾ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ಮಧ್ಯವರ್ತಿ ಎಂದು ಬಿಜೆಪಿ ಆರೋಪಿಸಿದೆ.
ಈ ಆರೋಪ ಆಧಾರ ರಹಿತವಾದದ್ದು ಎಂದಿರುವ ಕವಿತಾ, ಅದರೊಂದಿಗೆ ನಾನು ಏನೂ ಮಾಡಿಲ್ಲ ಎಂದಿದ್ದಾರೆ. ಬಿಜೆಪಿಯ ಮುಖಂಡರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪ ಸಂಪೂರ್ಣ ಆಧಾರ ರಹಿತವಾಗಿದೆ. ಅವರೇ ಎಲ್ಲಾ ಏಜೆನ್ಸಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದು, ತಮ್ಮ ಅಗತ್ಯಕ್ಕೆ ತಕ್ಕಂತೆ ವಿಚಾರಣೆ ಮಾಡಿಸುತ್ತಿದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರವನ್ನು ಟೀಕಿಸುವ ಕೆಸಿಆರ್ ಅವರ ನಡೆಯಿಂದ ಧೃತಿಗೆಟ್ಟಿರುವ ಬಿಜೆಪಿ, ತಮ್ಮ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನೂತನ ಲಿಕ್ಕರ್ ನೀತಿಯಲ್ಲಿ ಕಮಿಷನ್ ನ್ನು ಶೇ. 2.5 ರಿಂದ ಶೇ. 12ಕ್ಕೆ ಹೆಚ್ಚಿಸಲು ಮನೀಶ್ ಸಿಸೋಡಿಯಾ ಕೊಟ್ಯಾಂತರ ರೂ. ಲಂಚ ಪಡೆದಿದ್ದಾರೆ. ಈ ಸಂಬಂಧ ದೆಹಲಿಯ ಓಬೇರಾಯ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ದೆಹಲಿ ಅಬಕಾರಿ ಅಧಿಕಾರಿಗಳು, ಆಯುಕ್ತರು, ಮನೀಶ್ ಸಿಸೋಡಿಯಾ, ಲಿಕ್ಕರ್ ಮಾಫಿಯಾದಲ್ಲಿ ತೊಡಗಿರುವ ಜನರು ಹಾಗೂ ಕೆಲ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಇದರಲ್ಲಿ ಸಭೆಯಲ್ಲಿ ಕೆಸಿಆರ್ ಕುಟುಂಬದ ಸದಸ್ಯರು ಸಹ ಭಾಗವಹಿಸಿದ್ದರು ಎಂದು ಬಿಜೆಪಿ ಆರೋಪಿಸಿದೆ.
Advertisement