ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಭದ್ರತಾ ವೈಫಲ್ಯ; ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ: ಸುಪ್ರೀಂ ಕೋರ್ಟ್
ಕಳೆದ ಜನವರಿಯಲ್ಲಿ ಪಂಜಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಭದ್ರತಾ ವೈಫಲ್ಯ ಕಂಡು ಬಂದಿದ್ದು ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Published: 25th August 2022 11:52 PM | Last Updated: 25th August 2022 11:52 PM | A+A A-

ಪ್ರಧಾನಿ ಮೋದಿ ಭದ್ರತಾ ವೈಫಲ್ಯ
ನವದೆಹಲಿ: ಕಳೆದ ಜನವರಿಯಲ್ಲಿ ಪಂಜಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಭದ್ರತಾ ವೈಫಲ್ಯ ಕಂಡು ಬಂದಿದ್ದು ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮಲ್ಹೋತ್ರಾ ನೇತೃತ್ವದ ಸಮಿತಿಯು ಸುಪ್ರೀಂ ಕೋರ್ಟ್ ಗೆ ವರದಿಯನ್ನು ಸಲ್ಲಿಸಿದೆ. ಫಿರೋಜ್ ಪುರ ಎಸ್ಎಸ್ ಪಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಮ್ಮ ಕರ್ತ್ಯವವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.
ಸಾಕಷ್ಟು ಪೊಲೀಸ್ ಸಿಬ್ಬಂದಿ ಲಭ್ಯವಿದ್ದರೂ ಭದ್ರತೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮೋದಿ ಅವರು ಈ ಮಾರ್ಗದಲ್ಲಿ ಬರುತ್ತಾರೆ ಎಂದು 2 ಗಂಟೆ ಮೊದಲೇ ತಿಳಿದರೂ ಸಹ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಧಾನಿ ಭದ್ರತೆಯನ್ನು ಬಲಪಡಿಸಲು ಪರಿಹಾರ ಕ್ರಮಗಳನ್ನು ಐವರು ಸದಸ್ಯರ ಸಮಿತಿಯು ಸೂಚಿಸಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ಹೇಳಿದೆ. ಅಲ್ಲದೆ ಈ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದು ಹೇಳಿದೆ.
ಜನವರಿ 5ರಂದು ಚುನಾವಣಾ ರ್ಯಾಲಿಗಾಗಿ ಪ್ರಧಾನಿ ಫಿರೋಜ್ ಪುರಕ್ಕೆ ತೆರಳುತ್ತಿದ್ದಾಗ ರೈತರ ಪ್ರತಿಭಟನೆಯಿಂದಾಗಿ ಫ್ಲೈ ಓವರ್ ನಲ್ಲಿ 20 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಬಳಿಕ ಮೋದಿ ಅಲ್ಲಿಂದ ವಾಪಸ್ಸಾಗಿ ದೆಹಲಿಗೆ ತೆರಳಿದ್ದರು.