ಮುಂಬೈ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾಂಕುಳೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಭೇಟಿ ಕುತೂಹಲ ಮೂಡಿಸಿದೆ.
ಮುಂಬೈ ನಗರಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಎಂಎನ್ ಎಸ್ ನ್ನು ತನ್ನತ್ತ ಸೆಳೆಯುವುದಕ್ಕೆ ಈ ಭೇಟಿ ನಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬವಾಂಕುಳೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಭೇಟಿ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲವಾದರೂ ತಾವು ಎಂಎನ್ ಎಸ್ ಮುಖ್ಯಸ್ಥರೊಂದಿಗೆ ಮಹಾರಾಷ್ಟ್ರ ಹಾಗೂ ದೇಶಕ್ಕೆ ಸಂಬಂಧಿಸಿದ ಸಾಮಾಜಿಕ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಇದಕ್ಕೂ ಮುನ್ನ ಮಹಾರಾಷ್ಟ್ರ ಸಚಿವ ವಿನೋದ್ ತಾವ್ಡೆ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು. 2017 ರಲ್ಲಿ 227 ಕ್ಷೇತ್ರಗಳಿಗೆ ನಡೆದಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 82 ಸ್ಥಾನಗಳನ್ನು ಗಳಿಸಿತ್ತು ಇದು ಶಿವಸೇನೆಗಿಂತ ಕೇವಲ ಎರಡು ಸಂಖ್ಯೆ ಮಾತ್ರ ಹೆಚ್ಚಾಗಿತ್ತು. ಈಗ ಮರಾಠಿ ಮತಗಳನ್ನು ಸೆಳೆಯುವುದಕ್ಕಾಗಿ ರಾಜ್ ಠಾಕ್ರೆ ಅವರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿದ್ದಾರೆ. ಬಿಎಂಸಿ ಚುನಾವಣೆಗೆ ವೇಳಾಪಟ್ಟಿ ಇನ್ನಷ್ಟೇ ಘೋಷಣೆಯಾಗಬೇಕಿದೆ.
Advertisement