ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ್ದು ದೊಡ್ಡ ಅವಕಾಶ, ಯುವ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಿ: ಪ್ರಧಾನಿ ಮೋದಿ

ಇಂದು ಡಿಸೆಂಬರ್ 7 ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನ ಮುಂಭಾಗ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಇಂದು ಡಿಸೆಂಬರ್ 7 ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭ. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನ ಮುಂಭಾಗ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು. 

ಇಂದು ಸಂಸತ್ತಿನ ಅಧಿವೇಶನದ ಮೊದಲ ದಿನ. ಇದಕ್ಕೂ ಮುನ್ನ ಮುಂಗಾರು ಅಧಿವೇಶನಕ್ಕೆ ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ನಾವೆಲ್ಲ ಸಂಸತ್ತಿನಲ್ಲಿ ಒಟ್ಟು ಸೇರಿದ್ದೆವು. ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ನಾವು ವರ್ಷವಿಡೀ ಆಚರಿಸುತ್ತಿದ್ದೇವೆ. ಜಿ20 ಅಧ್ಯಕ್ಷೀಯ ಆತಿಥೇಯ ಸ್ಥಾನ ಸಿಕ್ಕಿರುವ ಸಮಯದಲ್ಲಿ ನಾವಿಂದು ಸಂಸತ್ತು ಕಲಾಪದಲ್ಲಿ ಒಟ್ಟು ಸೇರುತ್ತಿರುವುದು ಅವಕಾಶವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಭಾರತವು ಜಾಗತಿಕ ಸಮುದಾಯದಲ್ಲಿ ಜಾಗವನ್ನು ಮೂಡಿಸಿದ ರೀತಿ, ಭಾರತದೊಂದಿಗಿನ ನಿರೀಕ್ಷೆಗಳನ್ನು ಹೆಚ್ಚಿಸಿದ ರೀತಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿರುವ ರೀತಿ, ಇಂತಹ ಸಮಯದಲ್ಲಿ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಪಡೆಯುತ್ತಿದೆ ಎಂದರು.

ಈ ಜಿ 20 ಶೃಂಗಸಭೆ ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ, ಇದು ಪ್ರಪಂಚದ ಮುಂದೆ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವಾಗಿದೆ. ಅಂತಹ ದೊಡ್ಡ ದೇಶ, ಪ್ರಜಾಪ್ರಭುತ್ವದ ತಾಯಿ, ಅಂತಹ ವೈವಿಧ್ಯತೆ, ಅಂತಹ ಸಾಮರ್ಥ್ಯ - ಇದು ಜಗತ್ತಿಗೆ ಭಾರತವನ್ನು ತಿಳಿಯಲು ಮತ್ತು ಭಾರತಕ್ಕೆ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಒಂದು ಅವಕಾಶವಾಗಿದೆ ಎಂದರು.

ಈ ಅಧಿವೇಶನದಲ್ಲಿ, ಪ್ರಸ್ತುತ ಜಾಗತಿಕ ಪರಿಸ್ಥಿತಿಯ ನಡುವೆ ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು. ಎಲ್ಲಾ ಪಕ್ಷಗಳು ಚರ್ಚೆಗಳಿಗೆ ಮೌಲ್ಯವನ್ನು ಸೇರಿಸುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದರು. 

ಸಂಸತ್ತಿನ ಸುಗಮ ಕಲಾಪಕ್ಕೆ ಸಹಕಾರ ನೀಡಿ: ನಾನು ಕಳೆದ ಕೆಲ ದಿನಗಳಲ್ಲಿ ಅನಧಿಕೃತವಾಗಿ ಎಲ್ಲಾ ರಾಜಕೀಯ ಪಕ್ಷಗಳ ಸಂಸದರನ್ನು ಭೇಟಿಯಾದಾಗ ಅವರು ಹೇಳಿದ್ದು, ಸಂಸತ್ತು ಕಲಾಪದಲ್ಲಿ ಗಲಾಟೆ, ಗದ್ದಲವಾಗಿ ಮುಂದೂಡಲ್ಪಟ್ಟಾಗ ಅದು ಸಂಸದರ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಸಂಸತ್ತು ಕಲಾಪ ಸರಿಯಾಗಿ ನಡೆಯದಿದ್ದರೆ ತಮಗೆ ಕಲಿಯಲು ಸಾಧ್ಯವಾಗುವುದಿಲ್ಲ, ಅರ್ಥವಾಗುವುದಿಲ್ಲ ಎಂದು ಯುವ ಸಂಸದರು ನನಗೆ ಹೇಳುತ್ತಾರೆ ಎಂದು ಪ್ರಧಾನಿ ಹೇಳಿದರು.

ಹೀಗಾಗಿ ಸದನದ ಕಾರ್ಯಕಲಾಪ ಸುಗಮವಾಗಿ ಸಾಗುವುದು ಮುಖ್ಯವಾಗುತ್ತದೆ. ವಿಶೇಷವಾಗಿ ಯುವ ಸಂಸದರು ಇದನ್ನು ಹೇಳುತ್ತಾರೆ. ಚರ್ಚೆ, ಕಲಾಪಗಳಲ್ಲಿ ತಮಗೆ ಮಾತನಾಡಲು, ಕ್ಷೇತ್ರದ ಸಮಸ್ಯೆಗಳು, ಕೆಲಸ ಕಾರ್ಯಗಳ ಬಗ್ಗೆ ಹೇಳಲು ಅವಕಾಶ ಸಿಗುವುದಿಲ್ಲ ಎಂದು ವಿರೋಧ ಪಕ್ಷಗಳ ಸಂಸದರು ಕೂಡ ಹೇಳುತ್ತಾರೆ. ಸಂಸತ್ತು ಕಲಾಪ ಮುಂದೂಡಲ್ಪಟ್ಟರೆ ಸಾಕಷ್ಟು ನಷ್ಟವಾಗುತ್ತದೆ. ಇದನ್ನು ಎಲ್ಲಾ ಪಕ್ಷಗಳ ಸಂಸದರು ಅರ್ಥ ಮಾಡಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ ಎಂದರು.

ಮೊದಲ ಬಾರಿಗೆ ಸಂಸದರಾದವರಿಗೆ, ಹೊಸ ಸಂಸದರು, ಯುವ ಸಂಸದರು ಅವರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಪ್ರಜಾಪ್ರಭುತ್ವದ ಭವಿಷ್ಯದ ಪೀಳಿಗೆಯನ್ನು ಸಿದ್ಧಪಡಿಸಲು ಮತ್ತು ಚರ್ಚೆಯಲ್ಲಿ ಭಾಗವಹಿಸಲು ನಾವು ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕೆಂದು ನಾನು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕೋರುತ್ತೇನೆ ಎಂದರು. 

ರಾಜ್ಯಸಭಾ ಅಧ್ಯಕ್ಷರು: ಇದೇ ಮೊದಲ ಬಾರಿಗೆ ನಮ್ಮ ಉಪ ರಾಷ್ಟ್ರಪತಿಗಳು ರಾಜ್ಯಸಭಾ ಅಧ್ಯಕ್ಷರಾಗಿ ಪೀಠದಲ್ಲಿ ಕೂರುತ್ತಾರೆ. ಬುಡಕಟ್ಟು ಜನಾಂಗದಿಂದ ಬಂದು ಆ ಸಮುದಾಯದ ಮಗಳಾಗಿ ಇಂದು ಭಾರತದ ರಾಷ್ಟ್ರಪತಿ ಸ್ಥಾನಕ್ಕೇರಿ ದ್ರೌಪದಿ ಮುರ್ಮು ಅವರು ಬಹಳ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಇನ್ನು ರೈತನ ಮಗ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರಾಗಿ ಭಾರತ ಹೆಮ್ಮೆಪಡುವಂತಹ ಕೆಲಸವನ್ನು ಜಗದೀಪ್ ಧನ್ ಕರ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com