ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ ಏಳನೇ ಬಾರಿ ಗೆಲುವು ಸಾಧಿಸಿ ಗುಜರಾತ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನೋಡುತ್ತಿದೆ.
ಅಹಮದಾಬಾದ್, ಗಾಂಧಿನಗರ ಸೇರಿದಂತೆ ರಾಜ್ಯ ಬಿಜೆಪಿ ಕಚೇರಿಗಳಲ್ಲಿ, ದೆಹಲಿಯ ಬಿಜೆಪಿಯ ಕಚೇರಿಯಲ್ಲಿ ಸಂಭ್ರಮಾಚರಣೆ ಮುಂದುವರಿದಿದೆ. ಇಂದು ಸಂಜೆ 6 ಗಂಟೆಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಅದರಲ್ಲಿ ಗುಜರಾತ್ ನಲ್ಲಿ ಸರ್ಕಾರ ರಚನೆ, ಮುಖ್ಯಮಂತ್ರಿ ಪದಗ್ರಹಣ ಬಗ್ಗೆ ಚರ್ಚೆಯಾಗಲಿದೆ.
ಪ್ರಧಾನಿ ಮೋದಿಯವರು ತಮ್ಮ ಪಕ್ಷದ ಪ್ರಚಾರದ ಕೊನೆಯ ಕೆಲವು ವಾರಗಳಲ್ಲಿ 30ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದ್ದು ರಾಜ್ಯದ ನಾಯಕರಿಗೆ ವಿಶೇಷ ಶಕ್ತಿಯನ್ನು ತಂದಿತ್ತು. ಸೇತುವೆ ದುರಂತ ಸಂಭವಿಸಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದ ಮೋರ್ಬಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಕಾಂತಿಲಾಲ್ ಅಮೃತಿಯಾ ಜಯಭೇರಿ ಬಾರಿಸುತ್ತಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಹಿಮಾಚಲ ಪ್ರದೇಶದ ಕಸುಂಪ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಾಲಿ ಶಾಸಕ ಅನಿರುದ್ಧ್ ಸಿಂಗ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸುರೇಶ್ ಭಾರದ್ವಾಜ್ ಅವರನ್ನು ಹಿಂದಿಕ್ಕಿದ್ದಾರೆ.
ಚುನಾವಣಾ ಆಯೋಗ ಪ್ರಕಾರ ಹಮೀರ್ಪುರದಿಂದ ಸ್ವತಂತ್ರ ಅಭ್ಯರ್ಥಿ ಆಶಿಶ್ ಶರ್ಮಾ ಅಸೆಂಬ್ಲಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
Advertisement