ಅಹಮದಾಬಾದ್: ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರು ಮೋರ್ಬಿ ಸೇತುವೆ ಕುಸಿತದ ದುರಂತದ ಕುರಿತು ಪೋಸ್ಟ್ ಮಾಡಿದ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಆದರೆ ಮತ್ತೊಂದು ಪ್ರಕರಣದಲ್ಲಿ ಸಾಕೇತ್ ಅವರನ್ನು ಮೊರ್ಬಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ ವಿ ಚೌಹಾಣ್ ಅವರು ಗೋಖಲೆ ಅವರ ಪೊಲೀಸ್ ಕಸ್ಟಡಿ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನು ಮಂಜೂರು ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ) ಜಿತೇಂದ್ರ ಯಾದವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಟಿಎಂಸಿ, ಸಾಕೇತ್ ಗೋಖಲೆ ಅವರನ್ನು ಬಿಡುಗಡೆ ಮಾಡಿದ ಕೆಲವೇ ಹೊತ್ತಿನಲ್ಲಿ ಯಾವುದೇ ಕಾರಣವಿಲ್ಲದೆ ಮತ್ತೆ ಬಂಧಿಸಲಾಗಿದೆ. ದೇಶದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಅಪಾಯದಲ್ಲಿದ್ದು, ಗೋಖಲೆ ಬಿಡುಗಡೆಗೆ ಒತ್ತಾಯಿಸುತ್ತೇವೆ ಎಂದು ಹೇಳಿದೆ. ಅಲ್ಲದೆ ಗುಜರಾತ್ಗೆ ಮೂವರು ಸದಸ್ಯರ ನಿಯೋಗವನ್ನು ಕಳುಹಿಸಲು ಟಿಎಂಸಿ ನಿರ್ಧರಿಸಿದೆ. ಬೆಳವಣಿಗೆಯ ಹಿನ್ನೆಲೆಯಲ್ಲಿ ಮೂರು ಸದಸ್ಯರ ನಿಯೋಗವನ್ನು ಗುಜರಾತ್ನ ಮೊರ್ಬಿಗೆ ಕಳುಹಿಸಲಾಗಿದೆ ಎಂದು ಟಿಎಂಸಿ ಟ್ವೀಟ್ನಲ್ಲಿ ತಿಳಿಸಿದೆ.
135 ಜನರನ್ನು ಬಲಿ ತೆಗೆದುಕೊಂಡ ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಬದುಕುಳಿದವರನ್ನು ಪ್ರಧಾನಿ ಮೋದಿ ಭೇಟಿಯಾಗಲು 30 ಕೋಟಿ ವ್ಯಯಿಸಲಾಗಿದೆ ಎಂದು ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಆರೋಪದ ಮೇಲೆ ಸಾಕೇತ್ ಅವರನ್ನು ಡಿಸೆಂಬರ್ 6ರಂದು ಬಂಧಿಸಲಾಗಿತ್ತು. ನಿಯೋಗದಲ್ಲಿ ಹಿರಿಯ ನಾಯಕರಾದ ಡೋಲಾ ಸೇನ್, ಖಲೀಲುರ್ ರೆಹಮಾನ್ ಮತ್ತು ಅಸಿತ್ ಮಾಲ್ ಇದ್ದಾರೆ ಎಂದು ಪಕ್ಷ ತಿಳಿಸಿದೆ.
Advertisement