ಮಹಾರಾಷ್ಟ್ರ ಬೆಳವಣಿಗೆಗಳ ನಂತರ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಗೆಲ್ಲಲು ಉತ್ತಮ ಅವಕಾಶಗಳಿವೆ: ಮಮತಾ
ಕೋಲ್ಕತ್ತಾ: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸದ್ಯ ತಮ್ಮ ಧ್ವನಿಯನ್ನ ತಗ್ಗಿಸಿದ್ದಾರೆ. ಆಡಳಿತಾರೂಢ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿರುವುದರಿಂದ ದೀದಿ ಸೈಲೆಂಟಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಆಯ್ಕೆಗೆ ಕಠಿಣವಾದ ಪ್ರಯತ್ನವನ್ನು ಮಾಡಿದರು ಮತ್ತು ಅಭ್ಯರ್ಥಿಯನ್ನು ಬೆಂಬಲಿಸಲು ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳಿಗೆ ಕರೆ ಮಾಡಿ ಸಭೆ ನಡೆಸಿದರು. ಹೆಚ್ಚಿನ ಹುಡುಕಾಟದ ನಂತರ ಅವರು ತಮ್ಮ ಪಕ್ಷದ ತೃಣಮೂಲ ಕಾಂಗ್ರೆಸ್ನ ನಾಯಕ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಿದರು. ಆದರೆ ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದ್ದಂತೆ ಜುಲೈ 18 ರಂದು ಮತದಾನದ ದಿನದಂದು ಸಂಭವಿಸುವುದನ್ನ ದೀದಿ ಈಗಾಗಲೇ ನೋಡಿದಂತಿದೆ.
ಕೋಲ್ಕತ್ತಾದ ಇಸ್ಕಾನ್ ದೇವಸ್ಥಾನದಲ್ಲಿ ರಥಯಾತ್ರೆಯನ್ನು ಉದ್ಘಾಟಿಸಿದ ಮಾತನಾಡಿದ ಮಮತಾ ಬ್ಯಾನರ್ಜಿ, “ಬಿಜೆಪಿ ಅಭ್ಯರ್ಥಿಯ ಬಗ್ಗೆ ಮೊದಲೇ ತಿಳಿದಿದ್ದರೆ ನಾನು ಯೋಚಿಸುತ್ತಿದ್ದೆ… ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ದ್ರೌಪದಿ ಮುರ್ಮು ಗೆಲ್ಲುವ ಸಾಧ್ಯತೆ ಹೆಚ್ಚು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆಗಳ ನಂತರ ಮುರ್ಮು ಗೆಲ್ಲಲು ಉತ್ತಮ ಅವಕಾಶಗಳಿವೆ” ಎಂದು ಹೇಳಿದ್ದಾರೆ.
“ನಾವು ಆದಿವಾಸಿಗಳ ಬಗ್ಗೆ ಉತ್ತಮ ಭಾವನೆಗಳನ್ನು ಹೊಂದಿದ್ದೇವೆ. ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು ಜನಾಂಗದವರನ್ನು ನಾಮನಿರ್ದೇಶನ ಮಾಡುವುದಾಗಿ ಬಿಜೆಪಿ ಈ ಹಿಂದೆ ಹೇಳಿದ್ದರೆ ಅಥವಾ ತಮ್ಮ ಅಭ್ಯರ್ಥಿ ಘೋಷಿಸುವ ಮುನ್ನ ನಮ್ಮ ಸಲಹೆ ಕೇಳಿದ್ದರೆ ನಾವು ಅದನ್ನು ಪರಿಗಣಿಸಬಹುದಿತ್ತು” ಎಂದು ಬ್ಯಾನರ್ಜಿ ಹೇಳಿದ್ದಾರೆ.
ಜನರ ಹಿತದೃಷ್ಟಿಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ನಾನು ಈಗ ಒಬ್ಬಂಟಿಯಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. 17 ನಿರ್ಧಾರ ತೆಗೆದುಕೊಳ್ಳುವ ಪಕ್ಷಗಳು ಇದನ್ನು ನಿರ್ಧರಿಸಿವೆ. ಈಗ ನಾಮಪತ್ರ ಸಲ್ಲಿಕೆಯಾಗಿದೆ. ಇನ್ನೇನು ಮಾಡಬೇಕಿಲ್ಲ’ ಎಂದು ಬಂಗಾಳ ಮುಖ್ಯಮಂತ್ರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ