ನವದೆಹಲಿ: ಗುಜರಾತಿನ ಕಾಂಡ್ಲಾದಿಂದ ಮಂಗಳವಾರ ಹೊರಟಿದ್ದ ಸ್ಪೈಸ್ಜೆಟ್ ವಿಮಾನದ ಹೊರಭಾಗದ ವಿಂಡ್ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಇದು ಇಂದು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ಜೆಟ್ ನ ಎರಡನೇ ವಿಮಾನವಾಗಿದೆ.
ಮುಂಬೈನಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಪೈಸ್ಜೆಟ್ ಕ್ಯೂ400 ವಿಮಾನದಲ್ಲಿ ಕ್ರೂಸ್ ನ P2 ಸೈಡ್ ನ ಹೊರಗಿನ ವಿಂಡ್ಶೀಲ್ಡ್ ಬಿರುಕು ಬಿಟ್ಟಿತು. ಪರಿಶೀಲನೆಗೆ ವಿಮಾನವನ್ನು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು ಎಂದು ಏರ್ಲೈನ್ ತಿಳಿಸಿದೆ.
ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ಪೈಸ್ಜೆಟ್ನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಘಟಿಸಿದ ಏಳನೇ ಘಟನೆ ಇದಾಗಿದೆ.
ಇಂದು ಬೆಳಗ್ಗೆ ದೆಹಲಿಯಿಂದ ದುಬೈಗೆ ಹಾರುತ್ತಿದ್ದ ಸ್ಪೈಸ್ಜೆಟ್ ವಿಮಾನದಲ್ಲಿ ಇಂಡಿಕೇಟರ್ ಲೈಟ್ ನಲ್ಲಿ ಸಮಸ್ಯೆಯುಂಟಾದ ಕಾರಣ ವಿಮಾನ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು.
ಎರಡು ದಿನಗಳ ಹಿಂದೆಯಷ್ಟೇ ದೆಹಲಿಯಿಂದ ಜಬಲ್ಪುರಕ್ಕೆ ತೆರಳುತ್ತಿದ್ದ ಸ್ಪೈಸ್ಜೆಟ್ ಕ್ಯೂ400 ವಿಮಾನದ ಪೈಲಟ್ ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ‘ಮೇ ಡೇ’ ಸಂಕಷ್ಟದ ಕರೆ ಮಾಡಿ ದೆಹಲಿಗೆ ಮರಳಿತ್ತು.
ಜೂನ್ 19 ರಂದು185 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವು ಟೇಕ್ ಆಫ್ ಆದ ತಕ್ಷಣ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅದರ ಎಡ ಇಂಜಿನ್ಗೆ ಹಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು.
ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA) ಕಳೆದ ತಿಂಗಳಷ್ಟೇ ಸ್ಪೈಸ್ಜೆಟ್ ವಿಮಾನದ ಫ್ಲೀಟ್-ವೈಡ್ ಸುರಕ್ಷತಾ ಆಡಿಟ್ ಅನ್ನು ನಡೆಸಿತು ಮತ್ತು ಪ್ರಕರಣದ ಆಧಾರದ ಮೇಲೆ ತಪಾಸಣೆಗಳನ್ನು ಮುಂದುವರೆಸಿದೆ.
Advertisement