ಜಾರ್ಖಂಡ್: ಮುಸ್ಲಿಮರು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಶಾಲೆಗಳಿಗೆ ಶುಕ್ರವಾರ ರಜೆ!
ಮುಸ್ಲಿಮರು ಹೆಚ್ಚಾಗಿರುವ ಜಾರ್ಖಂಡ್ನ ಜಮ್ತಾರಾ ಜಿಲ್ಲೆಯ ಕರ್ಮತಾಂಡ್, ನಾರಾಯಣಪುರ ಮತ್ತು ಜಮ್ತಾರಾ ಬ್ಲಾಕ್ಗಳ 100 ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಭಾನುವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿದೆ.
Published: 11th July 2022 03:53 PM | Last Updated: 11th July 2022 03:53 PM | A+A A-

ಸಾಂದರ್ಭಿಕ ಚಿತ್ರ
ರಾಂಚಿ: ಮುಸ್ಲಿಮರು ಹೆಚ್ಚಾಗಿರುವ ಜಾರ್ಖಂಡ್ನ ಜಮ್ತಾರಾ ಜಿಲ್ಲೆಯ ಕರ್ಮತಾಂಡ್, ನಾರಾಯಣಪುರ ಮತ್ತು ಜಮ್ತಾರಾ ಬ್ಲಾಕ್ಗಳ 100 ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಭಾನುವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿದೆ.
ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯನ್ನು ಉಲ್ಲೇಖಿಸಿ ಶುಕ್ರವಾರ ರಜೆ ನೀಡಲಾಗಿದ್ದು, ಈ ಶಾಲೆಗಳಲ್ಲಿ ಸುಮಾರು ಶೇ. 70 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಇದನ್ನು ಓದಿ: ಇಂಟರ್ನ್ಶಿಪ್ ಗಾಗಿ ಬಂದಿದ್ದ ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಜಾರ್ಖಂಡ್ ಐಎಎಸ್ ಅಧಿಕಾರಿ ಬಂಧನ!
ಇತ್ತೀಚೆಗೆ, ಗರ್ವಾದಲ್ಲಿ ಸಾಂಪ್ರದಾಯಿಕ ಶಾಲಾ ಪ್ರಾರ್ಥನೆ ಮಾದರಿಯನ್ನು ಬದಲಾಯಿಸುವ ಮೂಲಕ ಅಪ್ರಾಪ್ತ ಶಾಲಾ ಮಕ್ಕಳ ಮೇಲೆ ಷರಿಯಾ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ಹೇರಲು ಮತ್ತು ಪ್ರಾರ್ಥನೆಯ ಸಮಯದಲ್ಲಿ ಮಕ್ಕಳನ್ನು ಕೈಜೋಡಿಸದಂತೆ ಒತ್ತಾಯಿಸುವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಜಿಲ್ಲಾಡಳಿತದ ಮಧ್ಯಸ್ಥಿಕೆಯ ನಂತರ ಅದನ್ನು ತಡೆಯಲಾಯಿತು.
“ಹೈಸ್ಕೂಲ್ ಆಗಿದ್ದರೂ, 2019 ರಲ್ಲಿ ನಾನು ಇಲ್ಲಿ ಶಿಕ್ಷಕರಾಗಿ ಸೇರಿದ ನಂತರ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುತ್ತಿರುವುದು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಈ ಸಂಬಂಧ ಜಿಲ್ಲಾ ಶಿಕ್ಷಣಾಧಿಕಾರಿಗೆ ಪತ್ರ ಬರೆದೆ, ಅವರು ನಿಯಮಗಳ ಪ್ರಕಾರ ರಜೆ ನೀಡುವಂತೆ ಹೇಳಿದರು. ಹೀಗಾಗಿ ನಾನು ನಿಯಮಗಳು ಭಾನುವಾರದಂದು ರಜೆ ನೀಡಲು ಪ್ರಾರಂಭಿಸಿದೆ, ಅದು ಕೆಲವು ತಿಂಗಳವರೆಗೆ ಮುಂದುವರೆಯಿತು ಎಂದು ಕರ್ಮತಾಂಡ್ ಬ್ಲಾಕ್ ನ ಶಾಲಾ ಶಿಕ್ಷಕರೊಬ್ಬರು ಹೇಳಿದ್ದಾರೆ.
ಉರ್ದು ಶಾಲೆಗಳಲ್ಲಿ ಶುಕ್ರವಾರ ರಜೆ ನೀಡುವುದಾಗಿ ಜಾರ್ಖಂಡ್ ಸರ್ಕಾರ ಕಳೆದ ವರ್ಷ ಅಧಿಸೂಚನೆ ಹೊರಡಿಸಿತ್ತು. ಆದರೆ ಉರ್ದು ಶಾಲೆಗಳು ಎಂದು ಗುರುತಿಸಲಾಗದ ಶಾಲೆಗಳಲ್ಲಿ ಕೂಡ ಶುಕ್ರವಾರ ರಜೆ ನೀಡುತ್ತಿರುವುದು ನಿಯಮದ ಉಲ್ಲಂಘನೆ ಎಂದು ಆರೋಪಿಸಲಾಗಿದೆ.
ಶಿಕ್ಷಣ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 1,084 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 15 ಶಾಲೆಗಳು ಮಾತ್ರ ಉರ್ದು ಶಾಲೆಗಳ ಹೆಸರಿನಲ್ಲಿ ನೋಂದಣಿಯಾಗಿವೆ. ಆದರೆ, ಗ್ರಾಮ ಶಿಕ್ಷಣ ಸಮಿತಿ ಹಾಗೂ ಸ್ಥಳೀಯ ಜನರ ಒತ್ತಡದಿಂದಾಗಿ ಹತ್ತಾರು ಶಾಲೆಗಳನ್ನು ಉರ್ದು ಶಾಲೆಗಳೆಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈ ಬಗ್ಗೆ ಶಿಕ್ಷಕರನ್ನು ಕೇಳಿದರೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇನ್ನು ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಮ್ತಾರಾ ಜಿಲ್ಲಾಧಿಕಾರಿ ಫೈಜ್ ಅಹ್ಮದ್ ಅವರು ಹೇಳಿದ್ದಾರೆ.