ಉತ್ತರ ಪ್ರದೇಶ: ವರುಣ ದೇವರ ಒಲಿಕೆಗಾಗಿ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಸ್ನಾನ!
ಮಹಾರಾಜ್ ಗಂಜ್: ಪೂರ್ವ ಉತ್ತರ ಪ್ರದೇಶದಲ್ಲಿ ಮುಂಗಾರು ಕೈಕೊಟ್ಟಿದ್ದು, ಜನತೆ ಕಂಗಾಲಾಗಿದ್ದು ವರುಣ ದೇವನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ.
ಇನ್ನು ಮಹಾರಾಜ್ ಗಂಜ್ ನ ಮಹಿಳೆಯರು ಮಳೆಗಾಗಿ ವಿಚಿತ್ರವಾದ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದೇನೆಂದರೆ ಶಾಸಕನ ಮೇಲೆ ಕೆಸರಿನ ನೀರನ್ನು ಸುರಿಯುವುದಾಗಿದೆ.
ಬಿಜೆಪಿ ಶಾಸಕ ಹಾಗೂ ನಗರಸಭೆ ಮುಖ್ಯಸ್ಥರಿಗೆ ವರುಣ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಕೆಸರಿನ ನೀರನ್ನು ಸುರಿಯಲಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ ಮಹಿಳೆಯರು ಬಿಜೆಪಿ ಶಾಸಕ ಜೈ ಮಂಗಲ್ ಕನೌಜಿಯಾ ಹಾಗೂ ನಗರಸಭೆ ಅಧ್ಯಕ್ಶರಾದ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಲ್ಲಿ ಮನವಿ ಮಾಡಿದ್ದು ಈ ಪ್ರಾರ್ಥನೆಯ ಭಾಗವಾಗಿರಬೇಕೆಂದು ಕೇಳಿಕೊಂಡಿದ್ದಾರೆ. ಮಹಿಳೆಯರ ಮನವಿಯನ್ನು ಮನ್ನಿಸಿರುವ ಇಬ್ಬರೂ ನಾಯಕರೂ ತಮ್ಮ ಮೇಲೆ ಕೆಸರಿನ ನೀರನ್ನು ಹಾಕಿಸಿಕೊಂಡಿದ್ದಾರೆ.
ಈ ಪ್ರದೇಶದ ಗಣ್ಯರು ಕೆಸರಿನಲ್ಲಿ ಸ್ನಾನ ಮಾಡಿದರೆ, ವರುಣ ದೇವ ಸಂತೃಪ್ತಗೊಂಡು ಮಳೆ ಬರಲಿದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಅದರಂತೆಯೇ ಮಹಿಳೆಯರು ಈ ಇಬ್ಬರೂ ನಾಯಕರ ಮೇಲೆ ಕೆಸರಿನ ನೀರನ್ನು ಹಾಕಿದ ಮೇಲೆ ವರುಣ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಈ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆ ಒಣಗುತ್ತಿದೆ.