ಮುಂಬೈ: ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ಜಾರಿಗೆ ಬರ್ತಿದ್ದಂತೆ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪೆಟ್ರೋಲ್ ದರದಲ್ಲಿ 5 ರೂ. ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ 3 ರೂ. ಕಡಿತಗೊಳಿಸಲು ತೀರ್ಮಾನಿಸಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸುವುದರಿಂದ ರಾಜ್ಯಕ್ಕೆ ವರ್ಷಕ್ಕೆ 6,000 ಕೋಟಿ ರೂ. ವೆಚ್ಚವಾಗಲಿದೆ. ಆದರೆ ಇದು ಒಟ್ಟಾರೆ ಹಣದುಬ್ಬರವನ್ನು ಕಡಿಮೆ ಮಾಡುತ್ತದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ. ನೂತನ ದರಗಳು ನಾಳೆಯಿಂದ ಜಾರಿಗೆ ಬರಲಿವೆ ಎಂದು ಸಿಎಂ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ಗೆ 111 ರೂ. ಮತ್ತು ಡೀಸೆಲ್ಗೆ 97 ರೂ ಇದೆ.
ಇಂಧನ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವುದಾಗಿ ಏಕನಾಥ್ ಶಿಂಧೆ ಕಳೆದ ವಾರ ಘೋಷಿಸಿದ್ದರು.
ಈ ನಿರ್ಧಾರವು ಶಿವಸೇನೆ-ಬಿಜೆಪಿ ಸರ್ಕಾರದ ಜನರ ಕಲ್ಯಾಣಕ್ಕಾಗಿ ಬದ್ಧತೆಯ ಭಾಗವಾಗಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಉದ್ಧವ್ ಠಾಕ್ರೆಯವರ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸರ್ಕಾರವನ್ನು ಬದಲಿಸಿದ ಶಿವಸೇನೆಯ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ್ದಾರೆ.
Advertisement