ಅಹ್ಮದಾಬಾದ್: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಗುಜರಾತ್ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಾಮೀನು ಮಂಜೂರು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್ ಅವರು 2022 ರ ದಂಗೆಗಳ ನಂತರ ಕಾಂಗ್ರೆಸ್ ನ ನಾಯಕ ಅಹ್ಮದ್ ಪಟೇಲ್ ಅವರ ಆಣತಿಯಂತೆ ಬಿಜೆಪಿ ಸರ್ಕಾರವನ್ನು ಉರುಳಿಸಲು ದೊಡ್ಡ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಕೋರ್ಟ್ ಗೆ ಪ್ರಮಾಣಪತ್ರದ ಮೂಲಕ ತಿಳಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿಡಿ ಥಾಕ್ಕರ್ ಎಸ್ ಐಟಿಯ ಪ್ರತಿಕ್ರಿಯೆಯನ್ನು ದಾಖಲಿಸಿಕೊಂಡಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ಗುಜರಾತ್ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಿಲುಕಿಸಲು "ಸಾಕ್ಷ್ಯಗಳನ್ನು ಸೃಷ್ಟಿಸಿದ್ದರ" ಆರೋಪದಡಿ ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ಅವರನ್ನು ಬಂಧಿಸಲಾಗಿದೆ.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಥವ ಉರುಳಿಸುವ ಅರ್ಜಿದಾರರಾದ (ಸೆಟಲ್ವಾಡ್) ನ ರಾಜಕೀಯ ಉದ್ದೇಶವಾಗಿತ್ತು. ಇದಕ್ಕಾಗಿ ಆಕೆ ಎದುರಾಳಿ ರಾಜಕೀಯ ಪಕ್ಷದಿಂದ ಅಕ್ರಮವಾಗಿ ಆರ್ಥಿಕ ಹಾಗೂ ಇನ್ನಿತರ ಪ್ರಯೋಜನ, ಪ್ರತಿಫಲಗಳನ್ನು ಅವರು ಪಡೆದಿದ್ದರು ಎಂದು ಎಸ್ಐಟಿ ಪ್ರಮಾಣಪತ್ರದಲ್ಲಿ ಹೇಳಿದೆ.
ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿರುವ ಎಸ್ಐಟಿ, ದಿವಂಗತ ನಾಯಕ ಅಹ್ಮದ್ ಪಟೇಲ್ ಅವರ ಆಣತಿಯಂತೆ ಈ ಕೆಲಸಗಳು ನಡೆದಿತ್ತು, ಅವರ ಆಣತಿಯ ಮೇರೆಗೇ ಸೆಟಲ್ವಾಡ್ ಗೆ 30 ಲಕ್ಷ ರೂಪಾಯಿ ಸಂದಾಯವಾಗಿತ್ತು ಎಂದು ಎಸ್ಐಟಿ ಹೇಳಿದೆ.
Advertisement