ಜಾರ್ಖಂಡ್: ಜಾರ್ಖಂಡ್ ನಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದಕ್ಕಾಗಿ ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ನ ಮೂವರು ಶಾಸಕರು ಬೃಹತ್ ಪ್ರಮಾಣದ ಹಣವದೊಂದಿಗೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಪತ್ತೆಯಾಗಿದ್ದು, ಮಹಾರಾಷ್ಟ್ರದ ಮಾದರಿಯಲ್ಲೇ ಜಾರ್ಖಂಡ್ ನಲ್ಲಿಯೂ ಬಿಜೆಪಿ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರು ಹೌರಾದ ರಾಣಿಹತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಸಂಚರಿಸುತ್ತಿದ್ದ ಎಸ್ ಯುವಿ ಒಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಸಂಚರಿಸುತ್ತಿದ್ದ ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಾಪ್ ಹಾಗೂ ನಮನ್ ಬಿಕ್ಸಾಲ್ ಕೊಂಗರಿ ಅವರ ಬಳಿ ಬೃಹತ್ ಪ್ರಮಾಣದ ಹಣ ಪತ್ತೆಯಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್ ನಲ್ಲಿ ಈ ಬಗ್ಗೆ ಬರೆದಿದ್ದು, ಹೌರಾದಲ್ಲಿ ನಡೆದ ಕಾರ್ಯಾಚರಣೆ ಜಾರ್ಖಂಡ್ ನಲ್ಲಿ ಬಿಜೆಪಿಯ ಆಪರೇಷನ್ ಕಮಲದ ಯತ್ನವನ್ನು ಬಯಲು ಮಾಡಿದೆ. ದೆಹಲಿಯಲ್ಲಿ ಹಮ್ ದೋ ಗೇಮ್ ಪ್ಲಾನ್ ಮಹಾರಾಷ್ಟ್ರದ ಮಾದರಿಯಲ್ಲೇ ಇ-ಡಿಯ ಮೂಲಕ ಸರ್ಕಾರ ಬೀಳಿಸುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಿವಸೇನೆಯ ಬಣ ರಾಜಕೀಯ ಸಂಘರ್ಷದ ನಡುವೆ ಶಿಂಧೆ ಸರ್ಕಾರಕ್ಕೆ 1 ತಿಂಗಳು; ಸಂಪುಟ ವಿಸ್ತರಣೆ ಸುಳಿವೇ ಇಲ್ಲ!
ಜಾರ್ಖಂಡ್ ಕಾಂಗ್ರೆಸ್ ಸಹ ತನ್ನ ಮೂವರು ಶಾಸಕರ ಬಳಿ ಪತ್ತೆಯಾದ ಹಣ ಹೇಮಂತ್ ಸೊರೇನ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಭಾಗವಾಗಿದೆ ಎಂದು ಹೇಳಿದೆ.
ಕಪ್ಪು ಬಣ್ಣದ ಕಾರಿನಲ್ಲಿ ಬೃಹತ್ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆಸಿದೆವು ಎಂದು ಹೌರಾ ಎಸ್ ಪಿ (ಗ್ರಾಮೀಣ) ಸ್ವಾತಿ ಭಂಗಾಲಿಯಾ ತಿಳಿಸಿದ್ದಾರೆ.
Advertisement