ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ವಿರೋಧಿಸಿ ಪ್ರತಿಭಟನಾನಿರತ ಕಾಂಗ್ರೆಸ್ ಪಕ್ಷದ ಕೆಲ ಸಂಸದರ ಮೇಲೆ ದೆಹಲಿ ಪೊಲೀಸರ ದೌರ್ಜನ್ಯ ಕುರಿತಂತೆ ಪಕ್ಷದ ಕಚೇರಿಯಲ್ಲಿಂದು ಸಭೆ ನಡೆಯಿತು.
ನಂತರ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿನ ನಿಯೋಗ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿರ್ ರಂಜನ್ ಚೌಧರಿ, ಪೊಲೀಸರಿಂದ ಆಗುತ್ತಿರುವ ದೌರ್ಜನ್ಯ ಹಾಗೂ ಹಿಂಸಾಚಾರದ ಬಗ್ಗೆ ವಿವರವಾಗಿ ಸ್ಪೀಕರ್ ಗೆ ತಿಳಿಸಿದ್ದೇವೆ ಎಂದರು.
ಕಾಂಗ್ರೆಸ್ ಸಂಸದರು ಮತ್ತು ಕಾರ್ಯಕರ್ತರ ಮೇಲೆ ಪೂರ್ವ ಯೋಜಿತ ಸಂಚಿನಂತೆ ಹಲ್ಲೆ ಮಾಡುತ್ತಿರುವ ದೆಹಲಿ ಪೊಲೀಸರ ವರ್ತನೆ ಬಗ್ಗೆ ಸ್ಪೀಕರ್ ಅವರೊಂದಿಗೆ ಮಾತನಾಡಿರುವುದಾಗಿ ಅವರು ಹೇಳಿದರು.
ಪೊಲೀಸ್ ಠಾಣೆಗಳಲ್ಲಿಯೂ ದೆಹಲಿ ಪೊಲೀಸರು, ಕಾಂಗ್ರೆಸ್ ಸಂಸದರು ಹಾಗೂ ಕಾರ್ಯಕರ್ತರನ್ನು ಉಗ್ರರಂತೆ ಕಾಣುತ್ತಿದ್ದಾರೆ. ರಾಹುಲ್ ಗಾಂಧಿ ವಿಚಾರಣೆಗೆ ನಾವು ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ, ಸೇಡಿನ ಮತ್ತು ಹಿಂಸಾತ್ಮಕ ರಾಜಕೀಯವನ್ನು ಬಳಸಬೇಡಿ ಎಂದು ನಾವು ಹೇಳಲು ಬಯಸುತ್ತೇವೆ ಎಂದು ಚೌಧರಿ ತಿಳಿಸಿದರು.
Advertisement