ಯಾರು ಈ ದ್ರೌಪದಿ ಮುರ್ಮು, ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಹಿಂದಿನ ಮರ್ಮವೇನು?
ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಜನಾಂಗ ಮಹಿಳೆ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಪಕ್ಷಗಳ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
Published: 22nd June 2022 09:05 AM | Last Updated: 22nd June 2022 12:26 PM | A+A A-

ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
ರೈರಂಗಪುರ್: ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ (NDA candidate) ಅಭ್ಯರ್ಥಿಯಾಗಿ ಒಡಿಶಾ ಮೂಲದ ಬುಡಕಟ್ಟು ಜನಾಂಗ ಮಹಿಳೆ ದ್ರೌಪದಿ ಮುರ್ಮು (Draupadi Murmu) ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ (President election) ಆಡಳಿತಾರೂಢ ಪಕ್ಷಗಳ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ತಾವು ಒಡಿಶಾ ರಾಜ್ಯದ ಮಣ್ಣಿನ ಮಗಳಾಗಿರುವುದರಿಂದ ಇಲ್ಲಿನ ಎಲ್ಲಾ ಪಕ್ಷಗಳ ಶಾಸಕರು ಮತ್ತು ಸಂಸದರು ಪಕ್ಷಬೇಧ ಮರೆತು ತಮಗೆ ಮತಹಾಕುವ ಆಶಾವಾದವನ್ನು ದ್ರೌಪದಿ ಮುರ್ಮು ಹೊಂದಿದ್ದಾರೆ.
ಒಬ್ಬ ಬುಡಕಟ್ಟು ಜನಾಂಗದ ಸ್ಥಳೀಯ ನಾಯಕಿಯಾಗಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿ ಜಾರ್ಖಂಡ್ ನ ರಾಜ್ಯಪಾಲ ಹುದ್ದೆಗೇರಿ ಇದೀಗ ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗುವವರೆಗೆ ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ಬಂದು ನಿಂತಿದೆ.
ತಾವು ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆಯಾಗಿ ಸುದ್ದಿವಾಹಿನಿಗಳಲ್ಲಿ ಬಂದಾಗ ನಿಜಕ್ಕೂ ಖುಷಿಯಾಯಿತು ಜೊತೆಗೆ ಅಚ್ಚರಿ ಕೂಡ ಆಯಿತು. ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬುಡಕಟ್ಟು ಜನಾಂಗದ ಮಹಿಳೆಯಾಗಿ ನಾನು ದೇಶದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯಾಗುತ್ತೇನೆಂದು ನಿಜಕ್ಕೂ ಭಾವಿಸಿರಲಿಲ್ಲ ಎಂದು ನಿನ್ನೆ ರೈರಂಗ್ ಪುರದಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಬಿಜೆಪಿಯ ಘೋಷವಾಕ್ಯ 'ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್' ಎಂಬ ತನ್ನ ಘೋಷವಾಕ್ಯವನ್ನು ಎನ್ ಡಿಎ ಸರ್ಕಾರ ಸಾಬೀತುಪಡಿಸಿದೆ ಎಂದು ಕೂಡ ಹೇಳಿದರು.
ಶೇಕಡಾ 2.8ರಷ್ಟು ಮತಗಳನ್ನು ಹೊಂದಿರುವ ಬಿಜೆಡಿ ಪಕ್ಷ ತಮಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆಯೇ ಎಂದು ಕೇಳಿದಾಗ ಒಡಿಶಾ ವಿಧಾನಸಭೆಯ ಎಲ್ಲಾ ಶಾಸಕರು ಮತ್ತು ರಾಜ್ಯದ ಸಂಸದರೆಲ್ಲರ ಬೆಂಬಲ ಗಳಿಸುವ ವಿಶ್ವಾಸ ತಮಗಿದೆ ಎಂದು ಹೇಳಿದರು.ನಾನು ಒಡಿಶಾ ಮಣ್ಣಿನ ಮಗಳು, ಹೀಗಾಗಿ ಎಲ್ಲಾ ಸದಸ್ಯರ ಬೆಂಬಲ ಕೇಳುವ ಹಕ್ಕು ತಮಗಿದೆ ಎಂದರು.
ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್ ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.
ಇದನ್ನೂ ಓದಿ: ದ್ರೌಪದಿ ಮುರ್ಮು ಶ್ರೇಷ್ಠ ರಾಷ್ಟ್ರಪತಿಯಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ: ಪ್ರಧಾನಿ ಮೋದಿ
ನಾನು ಈ ಅವಕಾಶವನ್ನು ನಿರೀಕ್ಷಿಸಿರಲಿಲ್ಲ. ನೆರೆಯ ಜಾರ್ಖಂಡ್ನ ರಾಜ್ಯಪಾಲೆಯಾದ ನಂತರ ಕಳೆದ ಆರು ವರ್ಷಗಳಿಂದ ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ. ಸಾರ್ವಜನಿಕ ಜೀವನದಿಂದ ಕೊಂಚ ದೂರ ಉಳಿದಿದ್ದೆ. ಇದೀಗ ಎಲ್ಲರೂ ನನ್ನನ್ನು ಬೆಂಬಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು. ದ್ರೌಪದಿ ಅಧ್ಯಕ್ಷೀಯ ಹುದ್ದೆಗೆ ಉಮೇದುವಾರಿಕೆಯನ್ನು ಪ್ರಕಟಿಸುತ್ತಿದ್ದಂತೆ, ರಾಜ್ಯಾದ್ಯಂತ ಮತ್ತು ವಿಶೇಷವಾಗಿ ಅವರು ವಾಸಿಸುವ ಮಯೂರ್ಭಂಜ್ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೊದಲು ಬಿಜೆಪಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆ ಸಮಾಲೋಚನೆ ನಡೆಸಿದ್ದು, ಅದಕ್ಕೆ ಮುಖ್ಯಮಂತ್ರಿ ಪಾಟ್ನಾಯಕ್ ತಮ್ಮ ಬಿಜೆಪಿ ಶಾಸಕರು ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಬಿಶೀಸ್ವರ್ ಟುಡು ತಿಳಿಸಿದ್ದಾರೆ.
ಝಡ್ + ಭದ್ರತೆ: ಇನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ದ್ರೌಪದಿ ಮುರ್ಮು ಅವರಿಗೆ ಝಡ್ + ಮಾದರಿಯ ಭದ್ರತೆಯನ್ನು ನೀಡಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಅವರಿಗೆ ಭದ್ರತೆ ನೀಡಲಾಗಿದೆ.
ಜೂನ್ 25ಕ್ಕೆ ನಾಮಪತ್ರ ಸಲ್ಲಿಕೆ?: ದ್ರೌಪದಿ ಮುರ್ಮು ಅವರು ಇದೇ 25ಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದೆ. ದ್ರೌಪದಿಯವರು ಆಯ್ಕೆಯಾದರೆ ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಳ್ಳಲಿದ್ದಾರೆ.
ದ್ರೌಪದಿ ಮುರ್ಮು ಒಡಿಶಾದಿಂದ ಪ್ರಮುಖ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟದ ಮೊದಲ ಅಧ್ಯಕ್ಷೀಯ ಅಭ್ಯರ್ಥಿ. ಜಾರ್ಖಂಡ್ನ ಮೊದಲ ಮಹಿಳಾ ಗವರ್ನರ್ ಆಗಿದ್ದರು. ಅವರು 2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದರು.
ಒಡಿಶಾದ ಹಿಂದುಳಿದ ಜಿಲ್ಲೆಯಾದ ಮಯೂರ್ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಡ ಬುಡಕಟ್ಟು ಕುಟುಂಬದಿಂದ ಬಂದ ದ್ರೌಪದಿ ಮುರ್ಮು ಸವಾಲುಗಳ ನಡುವೆಯೂ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮಾಡಿದ್ದರು.