ಮುಂಬೈ: ಏಕನಾಥ್ ಶಿಂಧೆ ನೇತೃತ್ವದಲ್ಲಿನ ಬಂಡಾಯ ಶಾಸಕರು 24 ಗಂಟೆಯೊಳಗೆ ಅಸ್ಸಾಂನಿಂದ ಮುಂಬೈಗೆ ಮರಳಿದರೆ ಮಹಾ ವಿಕಾಸ್ ಆಘಾದಿ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಾಗಿದೆ ಮತ್ತು ಸಮಸ್ಯೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.
ಪ್ರಸ್ತುತ ಏಕನಾಥ್ ಶಿಂಧೆ ನೇತೃತ್ವದಲ್ಲಿನ 37 ಶಿವಸೇನಾ ಬಂಡಾಯ ಶಾಸಕರು ಮತ್ತು 9 ಪಕ್ಷೇತರ ಶಾಸಕರು ಗೌವಾಹಟಿಯಲ್ಲಿ ತಂಗಿರುವುದರಿಂದ ಶಿವಸೇನಾ ನೇತೃತ್ವದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಎನ್ ಸಿಪಿ ಹಾಗೂ ಕಾಂಗ್ರೆಸ್ ಕೂಡಾ ಅಧಿಕಾರದ ಪಾಲು ಪಡೆದಿವೆ.
'' ನೀವು ನಿಜವಾದ ಶಿವ ಸೈನಿಕರಾದರೆ ಪಕ್ಷವನ್ನು ತೊರೆಯುವುದಿಲ್ಲ, 24 ಗಂಟೆಯೊಳಗೆ ಮುಂಬೈಗೆ ವಾಪಸ್ಸಾದರೆ ನಿಮ್ಮ ಬೇಡಿಕೆ ಪರಿಗಣಿಸಲು ನಾವು ಸಿದ್ಧರಿದ್ದೇವೆ. ಸಮಸ್ಯೆಗಳನ್ನು ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು, ನಿಮ್ಮ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು, ವಾಟ್ಸಾಪ್ ಅಥವಾ ಟ್ವೀಟರ್ ನಲ್ಲಿ ಪತ್ರ ಬರೆಯಬೇಡಿ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈನಿಂದ ಹೊರಗಿರುವ ಬಂಡಾಯ ಶಾಸಕರು ಹಿಂದೂತ್ವ ವಿಚಾರವೆತ್ತಿದ್ದಾರೆ. ಒಂದು ವೇಳೆ ಶಿವಸೇನಾ ಮಹಾ ಆಘಾದಿ ಸರ್ಕಾರ ತೊರೆಯಬೇಕೆಂಬುದು ಎಲ್ಲ ಶಾಸಕರಿಗೆ ಅನಿಸಿದರೆ ಮುಂಬೈಗೆ ವಾಪಸ್ಸಾಗಿ, ನೀವು ನಿಜವಾದ ಶಿವಸೈನಿಕರಾದರೆ ಮುಂಬೈಗೆ ವಾಪಸ್ಸಾಗಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತನಾಡಿ ಎಂದು ಅವರು ತಿಳಿಸಿದ್ದಾರೆ.
Advertisement