ಗುವಾಹಟಿ: ಮಹಾರಾಷ್ಟ್ರದ ರಾಜಕಾರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಹೆಸರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಈಗಿನ ಬಂಡಾಯ ಶಾಸಕರ ಪೈಕಿ ಗುರುತಿಸಿಕೊಂಡಿರುವ ಗೃಹ ಸಚಿವ ದೀಪಕ್ ಕೆಸರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಏಕನಾಥ್ ಶಿಂಧೆ ನೇತೃತ್ವದಲ್ಲಿರುವ ಶಾಸಕರು ಶಿವಸೇನಾ ಬಾಳಾಸಾಹೇಬ್ ಎಂಬ ಹೊಸ ಬಣವನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ ಶಿವಸೇನೆಯ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಶಿವಸೇನೆಯ ಮತ್ತೊಂದು ಬಣಕ್ಕೆ ಹೆಸರು ನೀಡಿರುವುದು ಶಿವಸೇನೆ ಇಬ್ಭಾಗವಾಗುತ್ತಿರುವುದರ ಲಕ್ಷಣ ಎಂದು ವಿಶ್ಲೇಷಿಸಲಾಗುತ್ತಿದೆ.
ಗುವಾಹಟಿಯಲ್ಲಿ ಶಿವಸೇನೆಯ 38 ಬಂಡಾಯ ಶಾಸಕರು ಇದ್ದು, ಶಿವಸೇನೆಯ ಕಾರ್ಯಕರ್ತರು ಪುಣೆಯಲ್ಲಿ ಬಂಡಾಯ ಶಾಸಕ ತನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಇನ್ನು ಈ ನಡುವೆ ಏಕನಾಥ್ ಶಿಂಧೆ ಅವರ ಭದ್ರ ಕೋಟೆಯಾಗಿರುವ ಥಾಣೆಯಲ್ಲಿ ಜಿಲ್ಲಾಡಳಿತ ಜೂ.30 ವರೆಗೆ ಯಾವುದೇ ರಾಜಕೀಯ ಮೆರವಣಿಗೆ ಸಭೆಗಳನ್ನು ನಡೆಸದಂತೆ ಸೆಕ್ಷನ್ 144 ನ್ನು ಜಾರಿಗೊಳಿಸಿದ್ದು, ಈ ಬೆನ್ನಲ್ಲೇ ಮುಂಬೈ ನಲ್ಲೂ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದೆ.
Advertisement