ಮುಂಬೈ: ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದು, ಉದ್ಧವ್ ಠಾಕ್ರೆಗೆ ಮೋಸ ಮಾಡಿದ ಎಲ್ಲಾ ಶಾಸಕರೂ ಇದೇ ರೀತಿಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಶನಿವಾರ ಹೇಳಿದ್ದಾರೆ.
ಪುಣೆಯ ಕತ್ರಾಜ್ನ ಬಾಲಾಜಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತರು ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ ಅವರು, ನಮ್ಮ ಪಕ್ಷದ ಕಾರ್ಯಕರ್ತರು ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಇದೇ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ. ಅವರ ಕಚೇರಿ ಮೇಲೂ ದಾಳಿ ನಡೆಯಲಿದೆ... ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಹೊರಗೆ ಇರುವ ನೀವು ಹದ್ದುಗಳಾಗಿರಬಹುದು. ಆದರೆ ಜನರ ತಾಳ್ಮೆ ಕ್ಷೀಣಿಸುತ್ತಿದೆ. ಸದ್ಯಕ್ಕೆ ಶಿವಸೇನೆ ಕಾರ್ಯಕರ್ತರು ಬೀದಿಗೆ ಬಂದಿಲ್ಲ. ಹಾಗೆ ಮಾಡಿದರೆ ಪ್ರತೀ ರಸ್ತೆಯಲ್ಲೂ ಬೆಂಕಿ ಬೀಳುತ್ತದೆ.
ಬಿಜೆಪಿಯರು ಮೇಕೆಗಳಂತೆ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿ. ನಿನ್ನೆ ರಾತ್ರಿ ಶರದ್ ಪವಾರ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಮಗೆ 10 (ಬಂಡಾಯ) ಶಾಸಕರಿಂದ ಕರೆ ಬಂದಿದೆ... ಸದನಕ್ಕೆ ಬನ್ನಿ, ನಮಗೂ ತಿಳಿಯುತ್ತದೆ. ಯಾರು ಬಲಿಷ್ಠರು ಎಂದು ಎಂದು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ನಡೆಯುವ ಸಭೆಯಲ್ಲಿ ಒಟ್ಟಿಗೆ ಕುಳಿತು ಪಕ್ಷದ ವಿಸ್ತರಣೆ ಮತ್ತು ಅದರ ಭವಿಷ್ಯದ ಬಗ್ಗೆ ಚರ್ಚಿಸುತ್ತೇವೆ. ಪಕ್ಷವು ಬಹಳ ದೊಡ್ಡದಾಗಿದ್ದು, ಅಷ್ಟು ಸುಲಭವಾಗಿ ಹೈಜಾಕ್ ಮಾಡಲು ಸಾಧ್ಯವಿಲ್ಲ. ನಮ್ಮ ರಕ್ತದಿಂದ ಪಕ್ಷವನ್ನು ಕಟ್ಟಿದ್ದೇವೆ. ಪಕ್ಷ ಕಟ್ಟಲು ಹಲವರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಹಣದಿಂದ ಅದನ್ನು ಮುರಿಯಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ತಾನಾಜಿ ಸಾವಂತ್ ಮಹಾರಾಷ್ಟ್ರದ ರಾಜ್ಯದ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.
Advertisement