ಮುಂಬೈನ ಕುರ್ಲ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಮೂವರು ಸಾವು, 12 ಮಂದಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ವಾಣಿಜ್ಯ ನಗರಿ ಮುಂಬೈಯ ಕುರ್ಲ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಕಳೆದ ಮಧ್ಯರಾತ್ರಿ ಕುಸಿದು ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಸಿದು ಬಿದ್ಗ ಕಟ್ಟಡದಡಿಯಿಂದ ರಕ್ಷಣಾ ಕಾರ್ಯ
ಕುಸಿದು ಬಿದ್ಗ ಕಟ್ಟಡದಡಿಯಿಂದ ರಕ್ಷಣಾ ಕಾರ್ಯ

ಮುಂಬೈ: ವಾಣಿಜ್ಯ ನಗರಿ ಮುಂಬೈಯ ಕುರ್ಲ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಕಳೆದ ಮಧ್ಯರಾತ್ರಿ ಕುಸಿದು ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಾಯಾಳುಗಳನ್ನು ಘಾಟ್‌ಕೋಪರ್ ಮತ್ತು ಸಿಯಾನ್‌ನಲ್ಲಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ಕರೆತಂದವರಲ್ಲಿ 28 ಮತ್ತು 30 ವರ್ಷದ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅವಶೇಷಗಳಡಿ ಸಿಲುಕಿದ್ದ ಮಹಿಳೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ರಕ್ಷಿಸಿದೆ. ಅವಶೇಷಗಳಡಿಯಿಂದ ಮಹಿಳೆಯನ್ನು ಜೀವಂತವಾಗಿ ಹೊರತರುವಾಗ ರಕ್ಷಕರು ಹರ್ಷೋದ್ಗಾರ ಮಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸುಮಾರು 20-22 ಜನರು ಅವಶೇಷಗಳಡಿ ಸಿಲುಕಿದ್ದಾರೆ.

ಸ್ಥಳದಲ್ಲಿ ಸುಮಾರು ಹನ್ನೆರಡು ಅಗ್ನಿಶಾಮಕ ಇಂಜಿನ್‌ಗಳನ್ನು ನಿಯೋಜಿಸಲಾಗಿದೆ, ಜೊತೆಗೆ ಎರಡು ರಕ್ಷಣಾ ವ್ಯಾನ್‌ಗಳು, ಇತರ ಅಗ್ನಿಶಾಮಕ ದಳದ ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ನಾಗರಿಕ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎನ್‌ಡಿಆರ್‌ಎಫ್ ಕಮಾಂಡೆಂಟ್ ಅನುಪಮ್ ಶ್ರೀವಾಸ್ತವ ಅವರು ತಮ್ಮ ಎರಡು ತಂಡಗಳು ಕಟ್ಟಡದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ತಿಳಿಸಿದ್ದಾರೆ. 

ಕಟ್ಟಡದ ಸಂಪರ್ಕಿತ ವಿಭಾಗವು ಶಿಥಿಲಾವಸ್ಥೆಯಲ್ಲಿದ್ದು ಕುಸಿದಿರುವ ಸಾಧ್ಯತೆಯಿದೆ. ಅದರ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) 2013 ರಿಂದ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪದೇ ಪದೇ ದುರಸ್ತಿಗಾಗಿ ಮತ್ತು ನಂತರ ಅದನ್ನು ತೆರವುಗೊಳಿಸಲು ಮತ್ತು ಕೆಡವಲು ಪದೇ ಪದೇ ನೋಟಿಸ್‌ಗಳನ್ನು ನೀಡುತ್ತಿದೆ ಎಂದು ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಅಶ್ವಿನಿ ಭಿಡೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಮಹಾನಗರದಲ್ಲಿ ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಪ್ರಮುಖ ಕಟ್ಟಡ ಕುಸಿತದ ಘಟನೆ ಇದಾಗಿದೆ.

ಕಳೆದ ಜೂನ್ 23ರಂದು, ಚೆಂಬೂರ್ ಪ್ರದೇಶದಲ್ಲಿ ಎರಡು ಅಂತಸ್ತಿನ ಕೈಗಾರಿಕಾ ಕಟ್ಟಡದ ಸ್ಲ್ಯಾಬ್ ಕುಸಿದು 22 ವರ್ಷದ ವ್ಯಕ್ತಿ ಮೃತಪಟ್ಟು 10 ಮಂದಿ ಗಾಯಗೊಂಡರು. ಜೂನ್ 9 ರಂದು, ಉಪನಗರ ಬಾಂದ್ರಾದಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡವು ಕುಸಿದುಬಿತ್ತು, ಅಲ್ಲಿ 55 ವರ್ಷದ ವ್ಯಕ್ತಿ ಮೃತಪಟ್ಟು 18 ಜನರು ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com