ಪ್ರಿಯತಮೆಯ ಕೊಂದು 35 ತುಂಡು ಮಾಡಿ ದೆಹಲಿಯಾದ್ಯಂತ ಎಸೆದಿದ್ದ ಭೂಪನ ಬಂಧನ!
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿದ್ದ ಪ್ರಿಯತಮೆಯ ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯಾದ್ಯಂತ ಬಿಸಾಡಿದ್ದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ನೀರಜ್ ಗ್ರೋವರ್ ಕೊಲೆಯನ್ನು ನೆನಪಿಸುವ ಹತ್ಯೆಯೊಂದು ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ತನ್ನೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ ಪ್ರೆಯಸಿಯನ್ನು ಕೊಲೆಗೈದು ಆಕೆಯ ದೇಹವನ್ನು 35 ತುಂಡಗಳಾಗಿ ಕತ್ತರಿಸಿ ನಗರದಾದ್ಯಂತ ಎಸೆದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಫ್ತಾಬ್ ಅಮೀನ್ ಪೂನಾವಾಲಾ ಬಂಧಿತ ಆರೋಪಿಯಾಗಿದ್ದು, ತನ್ನ ಗೆಳತಿ ಶ್ರದ್ಧಾಳೊಂದಿಗೆ ಜಗಳವಾಡಿದ್ದ ಈತ, ಮೇ.18ರಂದು ಆಕೆಯನ್ನು ಕೊಲೆಗೈದಿದ್ದ. ಬಳಿಕ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದ. ಮುಂದಿನ 18 ದಿನಗಳ ಕಾಲ ಮಧ್ಯರಾತ್ರಿ 2 ಗಂಟೆಗೆ ಮನೆಯಿಂದ ತೆರಳಿ ನಗರದಾದ್ಯಂತ ನಿತ್ಯ ದೇಹದ ಒಂದೊಂದು ಭಾಗಗಳನ್ನು ಎಸೆದುಬರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
26 ವರ್ಷದ ಶ್ರದ್ಧಾ ಮುಂಬೈನ ಕಾಲ್ಸೆಂಟರ್ನಲ್ಲಿ ಉದ್ಯೋಗಿಯಾಗಿದ್ದು, ಆರೋಪಿ ಅಫ್ತಾಬ್ನನ್ನು ಪೂನಾವಾಲಾದಲ್ಲಿ ಭೇಟಿಯಾಗಿದ್ದಳು. ಪ್ರೀತಿಯ ಬಲೆಗೆ ಬಿದ್ದ ಇಬ್ಬರು ಒಟ್ಟಾಗಿರಲು ಪ್ರಾರಂಭಿಸಿದ್ದರು. ಕುಟುಂಬ ಇವರ ಸಂಬಂಧಕ್ಕೆ ಒಪ್ಪದೇ ಇದ್ದಾಗ ಇಬ್ಬರೂ ದೆಹಲಿಗೆ ಬಂದು ಮೆಹ್ರೌಲಿಯ ವಾಸಿಸಲು ಪ್ರಾರಂಭಿಸಿದ್ದರು.
ಈ ಹಿಂದೆ ಮಗಳು ಶ್ರದ್ಧಾಗೆ ಆಕೆಯ ತಂದೆ ವಿಕಾಸ್ ಮದಾನ್ ಕರೆ ಮಾಡಿದ್ದಾರೆ. ಈ ವೇಳೆ ಮಗಳು ಕರೆ ಸ್ವೀಕರಿಸಿದಿದ್ದಾಗ ಗಾಬರಿಗೊಂಡ ಆಕೆಯ ತಂದೆ ವಿಕಾಸ್ ಮದಾನ್ ಮಗಳನ್ನು ನೋಡಲು ನ.8ರಂದು ದೆಹಲಿಗೆ ಬಂದಿದ್ದಾರೆ. ಆದರೆ ಆಕೆ ಉಳಿದುಕೊಂಡಿದ್ದ ಫ್ಲಾಟ್ ಬೀಗ ಹಾಕಿರುತ್ತದೆ. ಇದರಿಂದ ಗಾಬರಿಯಾದ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಬಳಿಕ ಕೊಲೆಯ ವಿಚಾರ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಆರೋಪಿ ಶ್ರದ್ದಾಳ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇಡಲು ಫ್ರಿಡ್ಜ್ ಖರೀದಿಸಿದ್ದ. ನಂತರ 18 ದಿನ ಆತ ಆಕೆಯ ದೇಹದ ತುಂಡುಗಳನ್ನು ದೆಹಲಿಯ ವಿವಿಧ ಭಾಗಗಳಲ್ಲಿ ಬಿಸಾಡಿದ್ದಾನೆ ಎನ್ನಲಾಗಿದೆ.
ಮದುವೆಗಾಗಿ ಒತ್ತಾಯಿಸಿದ್ದ ಶ್ರದ್ಧಾ
ಇನ್ನು ಹತ್ಯೆಗೂ ಮುನ್ನ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಅಫ್ತಾಬ್ ಅಮೀನ್ ಪೂನಾವಾಲಾ ನನ್ನು ಒತ್ತಾಸಿದ್ದರು ಎನ್ನಲಾಗಿದೆ. ಶ್ರದ್ಧಾ ಆತನನ್ನುಮದುವೆಯಾಗಲು ಬಯಸಿದ್ದರಿಂದ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತನಿಖೆಯ ವೇಳೆ ಆತ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ