ಲಿವ್-ಇನ್ ಸಂಬಂಧದಿಂದ ಅಪರಾಧ ಹೆಚ್ಚಳ: ಕೇಂದ್ರ ಸಚಿವ ಕೌಶಲ್ ಕಿಶೋರ್
ಲಿವ್-ಇನ್ ಸಂಬಂಧಗಳು ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಗುರುವಾರ ಹೇಳಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್, ಸುಶಿಕ್ಷಿತ ಯುವತಿಯರು ಇಂತಹ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
Published: 17th November 2022 09:01 PM | Last Updated: 19th December 2022 10:59 AM | A+A A-

ಕೇಂದ್ರ ಸಚಿವ ಕೌಶಲ್ ಕಿಶೋರ್
ನವದೆಹಲಿ: ಲಿವ್-ಇನ್ ಸಂಬಂಧಗಳು ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಗುರುವಾರ ಹೇಳಿರುವ ಕೇಂದ್ರ ಸಚಿವ ಕೌಶಲ್ ಕಿಶೋರ್, ಸುಶಿಕ್ಷಿತ ಯುವತಿಯರು ಇಂತಹ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಮೆಹ್ರೌಲಿಯಲ್ಲಿ ನಡೆದಿರುವ ಶ್ರದ್ಧಾಳ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕೌಶಲ್ ಕಿಶೋರ್ ಈ ರೀತಿಯ ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಶಿವಸೇನಾ ನಾಯಕಿ ಚತುರ್ವೇದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಕೌಶಲ್ ಕಿಶೋರ್, ಲೀವ್ ಇನ್ ಸಂಬಂಧದಿಂದ ಅಪರಾಧ ಹೆಚ್ಚಾಗುತ್ತಿದೆ. ಇದಕ್ಕೆ ಸುಶಿಕ್ಷಿತ ಹೆಣ್ಣು ಮಕ್ಕಳೇ ಜವಾಬ್ದಾರರು ಎಂದು ಹೇಳಿದ ಅವರು, ಅದರ ಬದಲು ಮದುವೆಗಾಗಿ ಕೋರ್ಟ್ ಗೆ ಹೋಗುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ಆಫ್ತಾಬ್ ಗೆ ನಾರ್ಕೋ ಪರೀಕ್ಷೆ ನಡೆಸಲು ಕೋರ್ಟ್ ಅನುಮತಿ
ಇಂತಹ ಅಪರಾಧಗಳಿಗೆ ವಿದ್ಯಾವಂತ ಹೆಣ್ಣು ಮಕ್ಕಳು ಕೂಡಾ ಕಾರಣರಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಏಕೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ಬದುಕುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಹಾಗೆ ಮಾಡಬೇಕಾದರೆ ಅದಕ್ಕೆ ಸರಿಯಾದ ನೋಂದಣಿ ಇರಬೇಕು. ಒಂದು ವೇಳೆ ಅಂತಹ ಸಂಬಂಧಗಳಿಗೆ ಸಾರ್ವಜನಿಕವಾಗಿ ಪೋಷಕರು ಒಪ್ಪದಿದ್ದಾಗ, ಕಾನೂನು ಪ್ರಕಾರ ಮದುವೆಯಾಗಿ ಒಟ್ಟಿಗೆ ಬದುಕಬೇಕು ಎಂದು ಅವರು ಹೇಳಿದರು.